ಪಶ್ಚಿಮಬಂಗಾಳದಲ್ಲಿ ಕರ್ತವ್ಯನಿರತ ವೈದ್ಯೆಯ ಮೇಲೆ ಅತ್ಯಾಚಾರ ಹಾಗೂ ಹತ್ಯೆ ಖಂಡಿಸಿ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು. ಗಡಿ ಜಿಲ್ಲೆ ಚಾಮರಾಜನಗರದ ಸಿಮ್ಸ್ ರೆಸಿಡೆಂಟ್ ಅಸೋಸಿಯೇಷನ್ನಿಂದ ಘಟನೆ ಹಾಗೂ ಆರೋಪಿ ವಿರುದ್ದ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಒಪಿಡಿ ಸೇವೆ ಇಲ್ಲದೇ ರೋಗಿಗಳು ಪರದಾಡುವಂತಾಯಿತು. ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಕರ್ತವ್ಯನಿರತ ವೈದ್ಯೆ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿರುವುದನ್ನು ಖಂಡಿಸಿ ಇಂದು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳ ರೆಸಿಡೆಂಟ್ ಡಾಕ್ಟರ್ ಅಸೋಸಿಯೇಷನ್ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಿದರು.
ನಗರದ ಜಿಲ್ಲಾಸ್ಪತ್ರೆ ಮುಂಭಾಗ ಜಮಾಯಿಸಿದ ಪ್ರತಿಭಟನಾಕಾರರು ಹತ್ಯೆ ಮಾಡಿದವರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ತೋಳಿಗೆ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು. ಅಸೋಸಿಯೇಷನ್ನ ಪ್ರಧಾನ ಕಾರ್ಯದರ್ಶಿ ಡಾ.ನಂದಕಿಶೋರ್ ಮಾತನಾಡಿ, ಕೊಲ್ಕತ್ತಾದ ಆರ್.ಜಿ.ಕರ್ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯನಿರತ ಯುವ ವೈದ್ಯೆ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಖಂಡನೀಯ.
ಈ ಪ್ರಕರಣವನ್ನು ಸಿಬಿಐಗೆ ವಹಿಸಿದ ಬಳಿಕ 1 ರಿಂದ 3 ಸಾವಿರ ಜನರ ಗುಂಪು ಆಸ್ಪತ್ರೆಗೆ ದಾಳಿ ಮಾಡಿ ಪುರಾವೆಗಳನ್ನು ನಾಶಪಡಿಸಿದ್ದಾರೆ. ಕೂಡಲೇ ನ್ಯಾಯಾಲಯವು ಹತ್ಯೆಯಾಗಿರುವಂತಹ ವೈದ್ಯರ ಮನೆಯವರಿಗೆ ಸೂಕ್ತ ಪರಿಹಾರ ನೀಡುವ ಮೂಲಕ ರಕ್ಷಣೆ ನೀಡಬೇಕು ಎಂದು ಆಗ್ರಹಿಸಿ ಇಂತಹ ಘಟನೆಗಳು ಮರುಕಳಿಸದಂತೆ ಸರ್ಕಾರಗಳು ನೋಡಿಕೊಳ್ಳಬೇಕು. ಈ ಘಟನೆಯಿಂದ ವೈದ್ಯರಿಗೆ ರಕ್ಷಣೆ ಇಲ್ಲದಂತಾಗಿದೆ.
ಹೆಣ್ಣು ಮಕ್ಕಳಿಗೆ ಸೂಕ್ತ ನ್ಯಾಯ ಕೊಡಿಸಬೇಕು ಅತ್ಯಾಚಾರ ಹಾಗೂ ಹತ್ಯೆ ಮಾಡಿದವರಿಗೆ ಕಠಿಣ ಶಿಕ್ಷೆ ವಿಧಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ರಾಜ್ಯ ಸರ್ಕಾರದ ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಭದ್ರತೆ ಒದಗಿಸಬೇಕು. ಈ ಘಟನೆಯನ್ನು ಖಂಡಿಸಿ ಸಿಮ್ಸ್ ರೆಸಿಡೆಂಟ್ ಅಸೋಸಿಯೇಷನ್ ವತಿಯಿಂದ ಒಪಿಡಿಯನ್ನು ರದ್ದುಪಡಿಸಿ ಧರಣಿ ಮಾಡಲಾಗುತ್ತದೆ. ಆದರೆ, ತುರ್ತು ಸೇವೆಗಳನ್ನು ಒದಗಿಸಲಾಗುತ್ತಿದೆ ಎಂದು ಹೇಳಿದರು ನಂತರ ಪ್ರತಿಭಟನಕಾರರು ಜಿಲ್ಲಾಧಿಕಾರಿ ಶಿಲ್ಪಾನಾಗ್ ಅವರ ಕೊಠಡಿಗೆ ತೆರಳಿ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಅಸೋಸಿಯೇಷನ್ನ ಅಧ್ಯಕ್ಷ ಡಾ.ಪವನ್, ಉಪಾಧ್ಯಕ್ಷೆ ಡಾ.ಸ್ನೇಹ, ಪ್ರಧಾನ ಕಾರ್ಯದರ್ಶಿ ಡಾ.ತರುಣ್, ಖಜಾಂಚಿ ಡಾ.ದಿವ್ಯ, ಡಾ.ಸಂಜು, ಡಾ.ಅಭಿಷೇಕ್ಕುಮಾರ್, ಡಾ.ಅರ್ಚನಾ, ಡಾ.ಸೈಯದ್ ಜಾಸ್ಮಿನ್, ಡಾ.ಸಮೃದ್ಧಿ, ಡಾ.ಅತುಲ್, ಡಾ.ತೇಜಸ್, ಡಾ.ಕೀರ್ತಿ, ಡಾ.ವಿನುತಾ, ಡಾ.ತನ್ಮಯ್ ಸೇರಿದಂತೆ ಇತರರು ಭಾಗವಹಿಸಿದ್ದರು.