ದಾವಣಗೆರೆ: ಬೊಲೆರೋ ವಾಹನ ಪಲ್ಟಿಯಾದ ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಆರು ಮಂದಿಗೆ ಗಂಭೀರ ಗಾಯಗಳಾಗಿರುವ ಘಟನೆ ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಸವಳಂಗ ಸಮೀಪದ ಚಿನ್ನಿಕಟ್ಟಿ ಎಂಬಲ್ಲಿ ನಡೆದಿದೆ. ಭದ್ರಾವತಿಯ ಚಂದನಕೆರೆ ಗ್ರಾಮದ ನಾಗರಾಜ್(38), ಮಂಜುನಾಥ್(45), ಗೌತಮ್(17) ಮೃತ ದುರ್ದೈವಿಗಳು. ಅಡಿಕೆ ಕೊಯ್ಲು ಮುಗಿಸಿ ವಾಪಾಸ್ ಬರುವಾಗ ರಸ್ತೆಗೆ ಹಸು ಅಡ್ಡ ಬಂದಿದೆ.
ಈ ವೇಳೆ ಚಾಲಕನ ನಿಯಂತ್ರಣ ತಪ್ಪಿ ಬೊಲೆರೊ ಪಲ್ಟಿಯಾಗಿದೆ. ಬೊಲೆರೋ ವಾಹನದಡಿ ಸಿಲುಕಿ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದರೆ, ಆರು ಮಂದಿ ಗಾಯಗೊಂಡಿದ್ದಾರೆ. ನ್ಯಾಮತಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗೆ ರವಾನಿಸಿದ್ದಾರೆ.