ಕನಕಪುರ: “ತೆರಿಗೆ ವಿಚಾರದಲ್ಲಿ ಕನ್ನಡ ನಾಡಿಗೆ ಆಗಿರುವ ದ್ರೋಹದ ಬಗ್ಗೆ ಪ್ರಶ್ನೆ ಮಾಡಿದ್ದಕ್ಕೆ, ಕೇಂದ್ರ ಸರಕಾರದಿಂದ ಕರ್ನಾಟಕಕ್ಕೆ ಆಗುತ್ತಿರುವ ತಾರತಮ್ಯ ಧೋರಣೆ ತಿಳಿಸಿದ್ದಕ್ಕೆ ನನ್ನನ್ನೇ ದೇಶದ್ರೋಹಿ ಎಂದು ಬಿಜೆಪಿಯವರು ಬಿಂಬಿಸಲು ಹೊರಟಿದ್ದಾರೆ. ಅವರಿಗೆ ಕರ್ನಾಟಕದ ಜನತೆ ತಕ್ಕ ಪಾಠ ಕಲಿಸಬೇಕಿದೆ” ಎಂದು ಸಂಸದ ಡಿ.ಕೆ.ಸುರೇಶ್ ಹೇಳಿದರು. ಕಾರ್ಯಕರ್ತರ ಸಭೆ ಉದ್ಘಾಟಿಸಿ ಮಾತನಾಡಿದರು.
ರಾಜ್ಯದಿಂದ ಕೇಂದ್ರಕ್ಕೆ ಸುಮಾರು 24 ಲಕ್ಷ ಕೋಟಿ ತೆರಿಗೆ ಹಣ ಹೋಗುತ್ತಿದೆ. ಒಬ್ಬ ಕನ್ನಡಿಗ ತಲಾ 13,428 ತೆರಿಗೆ ಕಟ್ಟುತ್ತಿದ್ದಾನೆ. ಉತ್ತರ ಪ್ರದೇಶದ ಒಬ್ಬ ವ್ಯಕ್ತಿ ಕೇವಲ 2793 ತೆರಿಗೆ ಕಟ್ಟುತ್ತಿದ್ದಾನೆ. ಆದರೆ ಕೇಂದ್ರ ಸರಕಾರ ತೆರಿಗೆ ಹಣ ಹಂಚಿಕೆಯಲ್ಲಿ ತಾರತಮ್ಯ ಮಾಡಿ ಬಹುಪಾಲು ಹಣವನ್ನು ಉತ್ತರ ರಾಜ್ಯಗಳಿಗೆ ಹಂಚಿಕೆ ಮಾಡಿ ದಕ್ಷಿಣ ರಾಜ್ಯಗಳಿಗೆ ವಂಚನೆ ಮಾಡುತ್ತಿದೆ ಎಂದು ದೂರಿದರು.
ಕೋವಿಡ್ ಸಂದರ್ಭದಲ್ಲಿಇಡೀ ದೇಶವನ್ನೇ ಲಾಕ್ಡೌನ್ ಮಾಡಿದಾಗ ರಾಜ್ಯ ಸರಕಾರ ಕೈಚೆಲ್ಲಿ ಕುಳಿತ್ತಿತ್ತು. ಆ ಸಂದರ್ಭದಲ್ಲಿ ರೈತರು ಬೆಳೆದ ಬೆಳೆಗಳು ಮಾರಾಟವಾಗದೆ ಅವರು ಕಷ್ಟದಲ್ಲಿದ್ದರು. ಅವರಿಂದ ಬೆಳೆಗಳನ್ನು ಖರೀದಿ ಮಾಡಿ ಅದನ್ನು ಜನತೆಗೆ ಹಂಚುವ ಕೆಲಸ ಮಾಡಿದ್ದೇನೆ. ಅದನ್ನು ಕ್ಷೇತ್ರದ ಜನತೆಗಾಗಿ ಮಾಡಿದ್ದೇನೆ ಹೊರತು ಯಾರನ್ನು ಮೆಚ್ಚಿಸಲು ಅಲ್ಲ ಎಂದರು.