ಬೆಳಗಾವಿ: ವಂಟಮೂರಿ ಪ್ರಕರಣದಲ್ಲಿ ಬಿಜೆಪಿ ಆರೋಪ ಮಾಡುತ್ತಿರುವುದಕ್ಕೆ ತಿರುಗೇಟು ಕೊಟ್ಟಿರುವ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಇದರಲ್ಲಿ ಬಿಜೆಪಿಯವರು ರಾಜಕೀಯ ಮಾಡುತ್ತಿದ್ದಾರೆ. ಗೃಹ ಸಚಿವರು ಸ್ಥಳಕ್ಕೆ ಭೇಟಿ ವಿಚಾರಣೆ ಮಾಡಿದ್ದಾರೆ. ಅವರು ಯಾಕೆ ರಾಜೀನಾಮೆ ಕೊಡಬೇಕು.? ಯಾರು ಕೂಡ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ. ಏನು ಮಾಡಬೇಕು ಎಂದು ಸಲಹೆ ನೀಡಲಿ ಎಂದು ತಿಳಿಸಿದ್ದಾರೆ.
ಬಿಜೆಪಿ ವಂಟಮೂರಿ ಪ್ರಕರಣಕ್ಕೆ ಹೆಚ್ಚು ಆಸಕ್ತಿ ತೋರುತ್ತಿರುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲದರಲ್ಲೂ ಬಿಜೆಪಿ ರಾಜಕೀಯ ಮಾಡ್ತಾರೆ. ಅದಕ್ಕೆ ಉತ್ತರ ಕೂಡಲಾಗಿದೆ. ಅವರು ರಾಜಕೀಯ ಮಾಡ್ತಾರೆ ಎಂದು ನಾವು ಮಾಡಲ್ಲ. ಅಲ್ಲಿ ಆಗಿದ್ದ ಘಟನೆ ಯಾರಿಗೆ ಚೇಂಜ್ ಮಾಡಲು ಸಾಧ್ಯವಿಲ್ಲ. ಇನ್ನೂ ಹತ್ತು ಸಾರಿ ಬಂದ್ರೂ ವಸ್ತು ಸ್ಥಿತಿ ಹಾಗೆ ಇರುತ್ತದೆ.
ಬಿಜೆಪಿಯವರು ಬೆಳಗಾವಿ ಘಟನೆಗೆ ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ದೇಶದಲ್ಲಿ ಇಂಥ ಬಹಳಷ್ಟು ಘಟನೆಗಳು ಆಗಿವೆ, ಅಲ್ಲಿಗೂ ಹೋಗಬೇಕು, ಇಲ್ಲಿ ಅಷ್ಟೇ ಬಂದರೆ ಅದು ರಾಜಕೀಯ ಅನಿಸುತ್ತೆ. ಮಣಿಪುರದ ಘಟನೆ ಮೂರು ತಿಂಗಳು ಇಡೀ ಜಗತ್ತೇ ನೋಡಿತ್ತು. ಆದರೂ ಅಲ್ಲಿ ಯಾರು ಹೋಗಲಿಲ್ಲ ಎಂದು ಸತೀಶ ಜಾರಕಿಹೊಳಿ ತಿರುಗೇಟು ಕೊಟ್ಟರು.