ಚಿತ್ರದುರ್ಗ, ಏ.25-ಭದ್ರ ಮೇಲ್ದಂಡೆ ಯೋಜನೆಗೆ ಬಿಜೆಪಿ ಸರ್ಕಾರವೇ ಅತಿ ಹೆಚ್ಚು ಅನುದಾನ ನೀಡಿದೆ ಎಂದು ಚಿತ್ರದುರ್ಗ ಲೋಕಸಭಾ ಬಿಜೆಪಿ ಅಭ್ಯರ್ಥಿ ಗೋವಿಂದ ಕಾರಜೋಳ ಹೇಳಿದರು. ನಗರದ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಿಯಾಂಕ ಗಾಂಧಿ ಅವರು ದೇಶದ ಆಡಳಿತ ಹೇಗೆ ನಡೆಯುತ್ತಿದೆ ಎಂಬ ಸಾಮಾನ್ಯ ಜ್ಞಾನವಿಲ್ಲದೆ ಮಾತನಾಡುತ್ತಿದ್ದಾರೆ. ಸರಿಯಾದ ಮಾಹಿತಿ ಇಲ್ಲದೆ ಯಾರೊ ಬರೆದು ಕೊಟ್ಟಿದ್ದನ್ನು ತಿಳಿಸಿದರೆ ಜನತೆ ನಂಬುವುದಿಲ್ಲ ಎಂದು ಆರೋಪಿಸಿದರು. ಭದ್ರ ಮೇಲ್ದಂಡೆ ಯೋಜನೆಯ ಯೋಜನೆಗೆ ನಾನು ಸಚಿವನಾಗಿದ್ದ ಸಂದರ್ಭದಲ್ಲಿ 2198 ಹಾಗೂ 2731 ಕೋಟಿ ಅನುದಾನ ನೀಡಿದ್ದೇವೆ. ಆದರೆ ಸಿದ್ದರಾಮಯ್ಯ ಐದು ಮುಖ್ಯಮಂತ್ರಿಯಾಗಿ ಕೇವಲ ರೂ.200 ಕೋಟಿ ಅನುದಾನ ನೀಡಿದ್ದಾರೆ. ಭದ್ರ ಮೇಲ್ದಂಡೆ ಯೋಜನೆಗಾಗಿ 12,000 ಕೋಟಿ ಅನುದಾನ ನೀಡಲಾಗಿದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರದ ಬಜೆಟ್ ನಲ್ಲಿ 5300 ಕೋಟಿ ಇರುವ ಅನುದಾನ ಮಂಜೂರಾಗಿದೆ ಇದಕ್ಕಿಂತ ಮತ್ತೊಂದು ದಾಖಲೆ ಬೇಕಾಗಿಲ್ಲ. ಈ ಹಣ ಬಿಡುಗಡೆಗೆ ಅಗತ್ಯವಿರುವ ದಾಖಲೆಗಳನ್ನು ನೀಡಿ ಕೇಂದ್ರ ಹೇಳುವ ಉದ್ದೇಶಕ್ಕೆ ಅಷ್ಟೇ ಅನುದಾನ ಬಳಸಿಕೊಳ್ಳುತ್ತೇವೆ. ಕಾಂಗ್ರೆಸ್ ಅಭ್ಯರ್ಥಿ ಬಿ ಎನ್ ಚಂದ್ರಪ್ಪ 2014 ರಿಂದ 2019 ರವರೆಗೆ ಸಂಸದರಾಗಿದ್ದರು. ಆದರೆ, ಭದ್ರ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವಂತೆ ಲೋಕಸಭೆಯಲ್ಲಿ ಎಂದು ಮಾತನಾಡಿಲ್ಲ. ಚಿತ್ರದುರ್ಗ ಜಿಲ್ಲೆಯಲ್ಲಿ ನೀರು ರೈಲು ಮಾರ್ಗ ಕ್ಕೆ ನಮ್ಮ ಮೊದಲ ಆದ್ಯತೆಯಾಗಿದೆ.
ಈಗಾಗಲೇ, ರಾಜ್ಯ ಸರ್ಕಾರದಿಂದ ಭೂ ಸ್ವಾಧೀನ ಪ್ರಕ್ರಿಯೆ ವಿಳಂಬವಾಗಿದ್ದರಿಂದ ತಡವಾಗುತ್ತಿದೆ. ಮುಂದಿನ ದಿನಗಳಲ್ಲಿ ನಮ್ಮ ಸರ್ಕಾರ ಬರಲಿದ್ದು ಬೇಗ ಈ ಕೆಲಸವನ್ನು ಮುಗಿಸುತ್ತೇವೆ. ಆಲಮಟ್ಟಿಯಿಂದ ಚಿತ್ರದುರ್ಗಕ್ಕೆ ರೈಲು ಮಾರ್ಗದ ಬೇಡಿಕೆ ಅಲ್ಲದೆ, ಜಿಲ್ಲೆಯಲ್ಲಿ ವಿಮಾನ ನಿಲ್ದಾಣಕ್ಕೆ ಬೇಡಿಕೆ ಇದೆ. ವಿಮಾನ ನಿಲ್ದಾಣವಾಗುವುದರಿಂದ, ಹೆಚ್ಚು ಹೆಚ್ಚು ಕೈಗಾರಿಕೆಗಳು ಸ್ಥಾಪನೆಯಾಗಳಿದ್ದು,ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದರು.
ನಂತರ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಮಾತನಾಡಿ, ನರೇಂದ್ರ ಮೋದಿ ಅವರು ಮೂರನೇ ಬಾರಿಗೆ ಪ್ರಧಾನಿಯಾಗುವುದು ನೂರಕ್ಕೆ ನೂರು ನಿಶ್ಚಿತ. ಅವರ ಉತ್ತಮ ಆಡಳಿತಕ್ಕೆ ಇಡೀ ದೇಶದ ಜನತೆ ಮತ್ತೊಮ್ಮೆ ಪ್ರಧಾನಿ ಮಾಡಲು ಮುಂದಾಗಿದ್ದಾರೆ. ಜಿಲ್ಲೆಯಲ್ಲಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲಿ ಕೇವಲ 763 ಕಿ.ಮೀ ರಸ್ತೆ ಕಾಮಗಾರಿ ನಡೆದಿದ್ದರೆ, ನಮ್ಮ ಬಿಜೆಪಿ ಸರ್ಕಾರದ ವರದಿಯಲ್ಲಿ 1946 ಕಿಲೋಮೀಟರ್ ರಸ್ತೆ ಕಾಮಗಾರಿ ನಡೆದಿದೆ. ಅಲ್ಲದೆ, ಕಾಂಗ್ರೆಸ್ ಸರ್ಕಾರ ಕೇವಲ 2766 ಮನೆಗಳನ್ನು ಕೊಟ್ಟಿದ್ದಾರೆ. ಬಿಜೆಪಿ ಆಡಳಿತದ ಅವಧಿಯಲ್ಲಿ, 18380 ಮನೆಗಳನ್ನು ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಕಾಂಗ್ರೆಸ್ ಸರ್ಕಾರ ಕರ್ನಾಟಕಕ್ಕೆ ಚಿಪ್ಪು ಕೊಟ್ಟಿದೆ ಆದರೆ ಬಿಜೆಪಿ ಸರ್ಕಾರ ಅಕ್ಷಯ ಪಾತ್ರೆ ಕೊಟ್ಟಿದೆ ಎಂದರು. ಕೇಂದ್ರ ಸರ್ಕಾರದಿಂದ ತೆರಿಗೆಯಲ್ಲಿ ಶೇಕಡ 13ರಷ್ಟು ಮಾತ್ರ ಕರ್ನಾಟಕಕ್ಕೆ ಬಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದು,ಈ ಬಗ್ಗೆ ಶ್ವೇತ ಪತ್ರ ಹೊರಡಿಸಲಿ ಎಂದು ಸವಾಲು ಹಾಕಿದರು. ಕಾಂಗ್ರೆಸ್ ಸರ್ಕಾರವಿದ್ದಾಗ ರಾಜ್ಯಕ್ಕೆ ಕೇವಲ 82,000 ಕೋಟಿ ಬಂದಿದೆ. ಆದರೆ, ಬಿಜೆಪಿ ಸರ್ಕಾರ 10 ವರ್ಷದ ಅವಧಿಯಲ್ಲಿ 3, ಲಕ್ಷ ಕೋಟಿ ನೀಡಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಎಂ ಚಂದ್ರಪ್ಪ, ವಿಧಾನ ಪರಿಷತ್ ಸದಸ್ಯ, ಎಸ್ ನವೀನ್, ಮಾಜಿ ಶಾಸಕ ತಿಪ್ಪಾರೆಡ್ಡಿ, ಬಿಜೆಪಿ ಜಿಲ್ಲಾಧ್ಯಕ್ಷ ಎ.ಮುರಳಿ, ಎಸ್ ಟಿ ಮೋರ್ಚ ರಾಜ್ಯಾಧ್ಯಕ್ಷ ಬಂಗಾರು ಹನುಮಂತು, ಜೆಡಿಎಸ್ ಜಿಲ್ಲಾಧ್ಯಕ್ಷ ಜಯಣ್ಣ ಸೇರಿದಂತೆ, ಇತರರು ಇದ್ದರು.
ವರದಿ: ಹನುಮಂತರಾಜು ಚಿತ್ರದುರ್ಗ