ಕೋಲಾರ:- ಕೋಲಾರ ಕ್ಷೇತ್ರದ ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಸ್ಪೋಟಕ ಹೇಳಿಕೆ ನೀಡಿದ್ದು, ಜೆಡಿಎಸ್ ಪಕ್ಷದ ಇಬ್ಬರು ಶಾಸಕರು ಲೋಕಸಭಾ ಚುನಾವಣೆ ಮುನ್ನವೇ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕೈ ಹಿಡಿಯಲಿದ್ದಾರೆ ಎಂದಿದ್ದಾರೆ. ಇದರೊಂದಿಗೆ ಲೋಕಸಭಾ ಚುನಾವಣೆಯ ಮೈತ್ರಿ ಮಾಡಿಕೊಂಡಿರುವ ಜೆಡಿಎಸ್ ಹಾಗೂ ಬಿಜೆಪಿಗೆ ಮಾಸ್ಟರ್ ಸ್ಟ್ರೋಕ್ ಕೊಡಲು ಸಿದ್ಧತೆ ನಡೆದಿದೆ ಎಂಬ ಮಾಹಿತಿ ರಿವೀಲ್ ಆಗಿದೆ.
ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಕೊತ್ತೂರು ಮಂಜುನಾಥ್, ಇಬ್ಬರು ಜೆಡಿಎಸ್ ಶಾಸಕರನ್ನ ಕೋಲಾರದ ಹಿರಿಯ ರಾಜಕಾರಣಿಯೊಬ್ಬರು ಸಿಎಂ ಮತ್ತು ಕೆಪಿಸಿಸಿ ಅಧ್ಯಕ್ಷರ ಬಳಿ ಕರೆದುಕೊಂಡು ಹೋಗಿದ್ದಾರೆ. ಮುಳಬಾಗಲು ಜೆಡಿಎಸ್ ಶಾಸಕ ಸಮೃದ್ದಿ ಮಂಜುನಾಥ್ ಮತ್ತು ಶ್ರೀನಿವಾಸಪುರ ಜೆಡಿಎಸ್ ಶಾಸಕ ಜಿ.ಕೆ. ವೆಂಕಟಶಿವಾರೆಡ್ಡಿ ಅವರು ಸಿಎಂ ಬಳಿ ಹೋಗಿದ್ದಾರೆ. ಇಬ್ಬರ ಕಾಂಗ್ರೆಸ್ ಸೇರ್ಪಡೆಗೆ ಸಿಎಂ ಹಾಗು ಡಿಸಿಎಂ ಅವರು ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅಭಿಪ್ರಾಯ ಕೇಳಿದ್ದಾರೆ.
ಇಬ್ಬರು ಜೆಡಿಎಸ್ ಶಾಸಕರು ಕಾಂಗ್ರೆಸ್ ಸೇರಲು ಸಿದ್ಧರಿದ್ದಾರೆ. ಲೋಕಸಭಾ ಚುನಾವಣೆಗೆ ಮುನ್ನವೇ ಸೇರಿಸಿಕೊಳ್ಳುವಂತೆ ಹೇಳಿದ್ದಾರಂತೆ. ಲೋಕಸಭಾ ಚುನಾವಣೆಗೆ ಮುನ್ನ ಬಂದರೆ ಅನುಕೂಲವಾಗುತ್ತದೆ. ಪಕ್ಷಕ್ಕೆ ಬಂದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿದ ನಂತರ ಚುನಾವಣೆ ಎದುರಿಸಬೇಕಾಗುತ್ತದೆ. ಆ ವೇಳೆ ಕಾಂಗ್ರೆಸ್ ಅಭ್ಯರ್ಥಿಗಳಾಗಿ ಚುನಾವಣೆಗೆ ನಿಲ್ತಾರೆ, ಜಿಕೆ ವೆಂಕಟಶಿವಾರೆಡ್ಡಿ ಕಾಂಗ್ರೆಸ್ ಪಕ್ಷಕ್ಕೆ ಬಂದರೆ, ರಮೇಶ್ ಕುಮಾರ್ ಅವರೇ ನಾಮಪತ್ರಕ್ಕೆ ಸೂಚಕರು. ಮುಳಬಾಗಲು ಶಾಸಕರು ಬಂದರೆ ನಾನು ಸೂಚಕರಾಗುವೆ. ಇವರ ಗೆಲುವಿಗೆ ನಾನು ಶ್ರಮಿಸುವೆ ಎಂದು ಕಾಂಗ್ರೆಸ್ ಶಾಸಕ ಕೊತ್ತೂರು ಮಂಜುನಾಥ್ ಹೇಳಿದ್ದಾರೆ.
ಅಲ್ಲದೇ, ಇದು ಅಪರೇಷನ್ ಅಲ್ಲ, ನಾನು ಬನ್ನಿ ಅಂತಾ ಕರೆದಿಲ್ಲ. ಇಬ್ಬರ ಸೇರ್ಪಡೆಗೆ ನಮ್ಮ ಮತ್ತು ರಮೇಶ್ ಕುಮಾರ್ ಅವರ ವಿರೋಧ ಸಹ ಇಲ್ಲ. ಕೋಲಾರಮ್ಮ ಅಣೆಗೂ ಸ್ವಾಗತ, ಆಂಜನೇಯಸ್ವಾಮಿ ಆಣೆಗೂ ಸ್ವಾಗತ ಮತ್ತು ದರ್ಗಾ ಆಣೆಗೂ ಸ್ವಾಗತ ಕೊರುತ್ತೇವೆ. ಸಮೃದ್ದಿ ಮಂಜುನಾಥ್ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಿದರೂ ಸಹ ನಾವು ರೆಡ್ಡಿ, ರಮೇಶ್ ಕುಮಾರ್ ಮುಂದೆ ರಾಜ್ಯಸಭಾ ಸದಸ್ಯರನ್ನಾಗಿ ಮಾಡಬಹುದು ಎಂದು ಹೇಳಿದ್ದಾರೆ.