ಆತ ಭೀಮಾತೀರದ ನಟೋರಿಯಸ್ ಹಂತಕ. ವಿಜಯಪುರ ಹಾಗೂ ಕಲಬುರಗಿ ಜಿಲ್ಲೆಗಳಲ್ಲಿ ಕ್ರಿಮಿನಲ್ ಲೋಕದ ದೊರೆಯಾಗಿ ಮೆರೆಯುತ್ತಿದ್ದ. ಭೀಮಾತೀರ ರಕ್ತ ಚರಿತ್ರೆಯಲ್ಲಿ ಕೇಳಿ ಬರುವ ಹೆಸರುಗಳಲ್ಲಿ ಇತನ ಹೆಸರು ಪ್ರಮುಖವಾಗಿರ್ತಿತ್ತು. ಒಂದು ಬಾರಿ ನಾಲ್ಕು ಗುಂಡು ತಗುಲಿದರು ಆತ ಅದೃಷ್ಠವಶಾತ್ ಪಾರಾಗಿದ್ದ. ಆತ ಐದು ವರ್ಷಗಳ ಬಳಿಕ ಮತ್ತೊಮ್ಮೆ ಹಂತಕರ ದಾಳಿಗೆ ಒಳಗಾಗಿ ಉಸಿರು ಚೆಲ್ಲಿದ್ದಾನೆ. ಭೀಮಾತೀರದ ರಕ್ತ ಚರಿತ್ರೆಯಲ್ಲಿ ಮತ್ತೊಂದು ಅಧ್ಯಾಯ ಸೇರ್ಪಡೆಯಾಗಿದೆ. ಒಂದು ಕೊಲೆ ಎರಡು ಜಿಲ್ಲೆಯನ್ನು ಬೆಚ್ಚಿ ಬೀಳಿಸಿದೆ. ಈ ಕುರಿತಾದ ಒಂದು ಕಂಪ್ಲೀಟ್ ವರದಿ ಇಲ್ಲದೆ ನೋಡಿ…
ಭೀಮಾತೀರದ ಹಂತಕ, ರೌಡಿಶೀಟರ್, ಕುಖ್ಯಾತ ನಟೋರಿಯಸ್ ಎನಿಸಿಕೊಂಡಿದ್ದ ಬಾಗಪ್ಪ ಹರಿಜನನ (50) ಭೀಕರ ಕೊಲೆಯಾಗಿದೆ. ವಿಜಯಪುರ ನಗರದ ರೇಡಿಯೋ ಕೇಂದ್ರದ ಬಳಿ ಬಾಗಪ್ಪನನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಕಳೆದ ಹಲವು ದಶಕಗಳಿಂದ ಭೀಮಾತೀರದ ಹಂತಕರ ಹೆಸರಿನಲ್ಲಿ ಸಂಚಲನ ಸೃಷ್ಠಿಸಿದ್ದ ಬಾಗಪ್ಪ ಹರಿಜನ ಇಂದು ಬೀದಿ ಹೆಣವಾಗಿದ್ದಾನೆ.
ಹಲವಾರು ಕೊಲೆ ಹಾಗೂ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಾಗಪ್ಪನ ಮೇಲೆ ಮಂಗಳವಾರ ರಾತ್ರಿ 8.50 ಗಂಟೆಗೆ ಅಟ್ಯಾಕ್ ನಡೆದಿದ್ದು, ಆತನ ಮುಖ, ಕೈ, ದೇಹವನ್ನು ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ಕೊಲೆ ಯಾರು ಮಾಡಿದ್ದಾರೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಇನ್ನೂ ಬಾಗಪ್ಪನ ಹಿನ್ನೆಲೆಯನ್ನು ಕೇಳಿದ್ರೆ ನೀವು ಬೆಚ್ಚಿ ಬಿಳ್ತಿರಿ…
ಮೂಲತಃ ಬಾಗಪ್ಪ ಹರಿಜನ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಬ್ಯಾಡಗಿಹಾಳ ಗ್ರಾಮದವನಾಗಿದ್ದಾನೆ. ಮೊದಲಿನಿಂದಲೂ ಭೀಮಾತೀರದ ಹಂತಕ ಚಂದಪ್ಪ ಹರಿಜನ ನಂಟಿನಲ್ಲೇ ಬೆಳೆದ ಬಾಗಪ್ಪ ಸಹ ಅದೇ ಹಾದಿ ಹಿಡಿದು ಹಂತಕ ಚಂದಪ್ಪನ ಸಹಚರನಾಗಿದ್ದ. ಚಂದಪ್ಪನ ಜೊತೆಗೆ ಸೇರಿ ಹಲವಾರು ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಆರೋಪ ಈತನ ಮೇಲಿತ್ತು. ಬಾಗಪ್ಪನ ಮೇಲಿದ್ದ 10 ಪ್ರಕರಣಗಳನ್ನು ನೋಡೊದಾದ್ರೆ
ಕೊಲೆ, ಕೊಲೆಯತ್ನ, ಸುಲಿಗೆ, ದರೋಡೆ, ಗುಂಡು ಹಾರಿಸಿದ ಪ್ರಕರಣ, ಬೆದರಿಕೆ ಸೇರಿದಂತೆ ವಿವಿಧ ಠಾಣೆಗಳಲ್ಲಿ ಬಾಗಪ್ಪ ಹರಿಜನನ ಮೇಲೆ ಒಟ್ಟು ಹತ್ತು ಪ್ರಕರಣಗಳಿವೆ. ಕುಖ್ಯಾತ ಹಂಚಕ ಚಂದಪ್ಪ ಹರಿಜನನ ಜೊತೆಗೆ ಸಹಚರನಾಗಿ ಬೆಳೆದಿದ್ದ ಬಾಗಪ್ಪ ಚಂದಪ್ಪನ ನಂತರದಲ್ಲಿ ಚಂದಪ್ಪನ ತಮ್ಮ ಬಸವರಾಜ ಹರಿಜನನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದನು. ಇದರಿಂದಾಗಿ ಚಂದಪ್ಪ ಹರಿಜನನ ಸಂಬಂಧಿ ಮುತ್ತುರಾಜನನ್ನು ಕೊಲೆ ಮಾಡಿದ ಆರೋಪ ಇದೆ.
10th, PUC ಪಾಸಾದವರಿಗೆ ಅಂಚೆ ಇಲಾಖೆಯಲ್ಲಿ ಭರ್ಜರಿ ಉದ್ಯೋಗಾವಕಾಶ..! ಇಂದೇ ಅಪ್ಲೈ ಮಾಡಿ
2020 ಜುಲೈ 19 ರಂದು ಇಂಡಿಯ ಚಿನ್ನದ ವ್ಯಾಪಾರಿ ನಾಮದೇವ ಡಾಂಗೆಗೆ ಮೂರು ಕೇಜಿ ಚಿನ್ನ ಅಥವಾ 5 ಕೋಟಿ ಹಣ ಕೊಡುವಂತೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ಆರೋಪ. 1997 ರಲ್ಲಿ ಬಾಗಪ್ಪ ಚಡಚಣ ಠಾಣೆ ವ್ಯಾಪ್ತಿ ನಡೆದಿದ್ದ ಕೊಲೆಯೊಂದರಲ್ಲಿ ಭಾಗಿಯಾಗಿದ್ದ ಎನ್ನಲಾಗಿದೆ. 1998ರಲ್ಲಿ ಆಳಂದ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಎರಡು ಕೊಲೆಗಳು ಹಾಗೂ ಅಪಹರಣ ಪ್ರಕರಣದಲ್ಲೂ ಈತನ ಹೆಸರು ಕೇಳಿ ಬಂದಿತ್ತು.
1999ರಲ್ಲಿ ಆಲಮೇಲ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆಯೊಂದರಲ್ಲಿ ಈತನ ಹೆಸರು ತಳುಕು ಹಾಕಿಕೊಂಡಿತ್ತು. ಬ್ಯಾಡಗಿಹಾಳದಲ್ಲಿ ನಡೆದ ಕೊಲೆ, ಆಳಂದ ಠಾಣೆ ವ್ಯಾಪ್ತಿ ಕೊಲೆ, ಬಸವಕಲ್ಯಾಣ ಠಾಣೆ ವ್ಯಾಪ್ತಿ ಕೊಲೆ ಯತ್ನ ಆರೋಪ. 2001 ರಲ್ಲಿ ಆಲಮೇಲ ಠಾಣೆ ವ್ಯಾಪ್ತಿ ಕೊಲೆ, ಸಾಕ್ಷಿಗಳ ಮೇಲೆ ಗುಂಡು ಹಾರಿಸಿದ್ದ ಆರೋಪ. 2003 ರಲ್ಲಿ ಅಪ್ಜಲಪುರ ತಾಲೂಕಿನ ಶಿರೋಳದಲ್ಲಿ ನಡೆದ ನಾಲ್ವರ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪವಿದೆ. ಹಂತಕ ಬಾಗಪ್ಪ ಹರಿಜನನ ಮೇಲೆ 2017 ಆಗಸ್ಟ್ 8 ರಂದು ಜಿಲ್ಲಾ ನ್ಯಾಯಾಲಯದ ಆವರಣದಲ್ಲೇ ಬೆಳಗ್ಗೆ 10.40 ಕ್ಕೆ ಗುಂಡಿನ ದಾಳಿ ನಡೆದಿತ್ತು.
ಭೀಮಾತೀರದ ಹಂತಕ ಚಂದಪ್ಪ ಹರಿಜನ 2000 ರಲ್ಲಿ ಪೊಲೀಸ್ ಎನಕೌಂಟರ್ ಗೆ ಬಲಿಯಾದ ಬಳಿಕ 14 ವರ್ಷಗಳ ನಂತರದಲ್ಲಿ ಚಂದಪ್ಪನ ತಮ್ಮ ಬಸವರಾಜ ಹರಿಜನನ ಕೊಲೆಯಾಗಿತ್ತು. ಇದರಲ್ಲಿ ಬಾಗಪ್ಪ ಭಾಗಿಯಾಗಿದ್ದ ಎನ್ನಲಾಗಿತ್ತು. ಹೀಗೆ ಬಿಟ್ಟರೆ ಬಾಗಪ್ಪ ನಮ್ಮನ್ಯಾರನ್ನೂ ಉಳಿಸೋದಿಲ್ಲ ಎಂದುಕೊಂಡ ಚಂದಪ್ಪನ ಅಣ್ಣನ ಮಗನಾದ ಭೀಮಶ್ಯಾ ಹರಿಜನ ತನ್ನ ಪರಿಚಯಸ್ಥರಿಗೆ ಸುಪಾರಿ ನೀಡಿ ಕೊಲೆ ಮಾಡಲು ಯತ್ನಿಸಿದ್ದ. ಈ ವೇಳೆ ಸುಪಾರಿ ಪಡೆದಿದ್ದ ಪೀರಪ್ಪ ಹಡಪದ ಎಂಬಾತ ಬಾಗಪ್ಪನ ಮೇಲೆ ಕೋರ್ಟ್ ಆವರಣದಲ್ಲೇ ಮೂರು ಸುತ್ತು ಗುಂಡು ಹಾರಿಸಿದ್ದರೂ ಬಾಗಪ್ಪ ಚಿಕಿತ್ಸೆ ಪಡೆದು ಬದುಕುಳಿದಿದ್ದ. ಬಾಗಪ್ಪನ ಮೇಲೆ ಗುಂಡು ಹಾರಿಸಿದ್ದ ಪ್ರಕರಣದಲ್ಲಿ ಒಟ್ಟು ಆರು ಆರೋಪಿಗಳಿದ್ದರು…
ಇನ್ನೂ ಇತ್ತೀಚಿನ ಬಾಗಪ್ಪನ ದೂರದ ಸಂಬಂಧಿ ರವಿ ಎಂಬಾತನ ಕೊಲೆ ಅಗಷ್ಟ 8 ರಂದು ನಡೆದಿತ್ತು. ವಿಜಯಪುರ ನಗರದ ಬಸವನಗರ ಕ್ರಾಸ್ ಬಳಿ ಆತನ ಬೈಕ್ ಗೆ ಕಾರೊಂದು ಗುದ್ದಿಸಿ ಸುಮಾರು ಎರಡು ಕಿಲೋ ಮಿಟರ್ ಎಳೆದು ಕೊಂಡು ಹೋಗಿತ್ತು, ಈ ಕೊಲೆ ಪ್ರಕರಣದಲ್ಲಿ ಬಾಗಪ್ಪನ ಹೆಸರು ಕೇಳಿ ಬಂದಿತ್ತು, ಅದೇ ಸಿಟ್ಟಿನಿಂದ ಈ ಹಿಂದೆ ಕೊಲೆಯಾದ ರವಿ ಅಗರಖೇಡ್ ಸಹೋದರ ಪಿಂಟ್ಯಾ ಕೊಲೆ ಮಾಡಿದ್ದಾನೆ ಎಂದ ಆತನ ವಿರುದ್ಧ ದೂರು ದಾಖಲಾಗಿದೆ. ಜೊತೆಗೆ ಆತ ನನ್ನ ಸ್ಟೇಟಸ್ ನಲ್ಲಿ ಅಣ್ಣ ಆತ್ಮಕ್ಕೆ ಇಂದು ಶಾಂತಿ ಸಿಕ್ಕಿತು ಎಂದು ಹಾಕಿಕೊಂಡಿದ್ದಾನೆ.
ಇದರಿಂದಾಗಿ ಮೃತ ಬಾಗಪ್ಪನ ಮಗಳು ಪಿಂಟ್ಯಾ ವಿರುದ್ದ ಆರೋಪ ಮಾಡಿದ್ದಾರೆ. ಗಾಂಧಿಚೌಕ ಪೊಲೀಸ್ ಠಾಣೆಯಲ್ಲಿ ಬಾಗಪ್ಪ ಮಗಳು ಗಂಗೂಬಾಯಿ ದೂರು ನೀಡಿದ್ದು. ರವಿ ಸಹೋದರ ಪಿಂಟ್ಯಾ ಹಾಗೂ ಸಹಚರರಿಂದ ಕೃತ್ಯ ಎಂದು ದೂರು ದಾಖಲಾಗಿದೆ. ಪಿಂಟ್ಯಾ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಸದ್ಯ ಬಾಗಪ್ಪ ಹರಿಜನ ಶವ ಆಸ್ಪತ್ರೆಯಲ್ಲಿದೆ. ಮರಣೋತ್ತರ ಪರೀಕ್ಷೆ ಬಳಿಕ ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗುತ್ತದೆ. ಬಾಗಪ್ಪ ಹರಿಜನ ಹತ್ಯೆ ಹಿನ್ನಲೆಯಲ್ಲಿ ಪೊಲೀಸರು ವಿಜಯಪುರದಲ್ಲಿ ಹೆಚ್ಚಿನ ನಿಗಾವಹಿಸಿದ್ದಾರೆ. ಒಟ್ಟಿನಲ್ಲಿ ಇತ್ತಿಚೆಗೆ ವಿಜಯಪುರ ಜಿಲ್ಲೆಯಲ್ಲಿ ಕ್ರೈಮ್ ರೇಟ್ ಹೆಚ್ಚಾಗಿ ಜನತೆಯಲ್ಲಿ ಆತಂಕ ಸೃಷ್ಟಿಸಿತ್ತು. ಇಂತಹದರಲ್ಲೇ ಈ ಘಟನೆ ಜನತೆಯಲ್ಲಿ ಮತ್ತಷ್ಟು ಆತಂಕ ಮೂಡಿಸಿ ನಿದ್ದೆಗೆಡಿಸಿದೆ…