ಬೆಂಗಳೂರು:- ನಗರದಲ್ಲಿ ಪದೇಪದೇ ಸಂಚಾರ ನಿಯಮ ಉಲ್ಲಂಘಿಸಿ ಕಣ್ತಪ್ಪಿಸಿಕೊಂಡು ಓಡಾಡುತ್ತಿರುವ ವಾಹನಗಳ ಮಾಲೀಕರನ್ನು ಪತ್ತೆ ಮಾಡಿ ದಂಡ ವಸೂಲಿಗೆ ಪೊಲೀಸರು ಮನೆ ಬಾಗಿಲಿಗೆ ಹೋಗುತ್ತಿದ್ದಾರೆ.
ನಗರದಲ್ಲಿ ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಹೆಚ್ಚಾಗುತ್ತಿದ್ದು, ಹಲವರು ದಂಡ ಕಟ್ಟದೆ ಬಾಕಿ ಉಳಿಸಿಕೊಳ್ಳುತ್ತಿದ್ದಾರೆ.
ಅತೀ ಹೆಚ್ಚು ದಂಡ ಬಾಕಿ ಇರುವ ವಾಹನಗಳ ಮಾಲೀಕರ ಪಟ್ಟಿ ಸಿದ್ಧಪಡಿಸಿರುವ ಪೊಲೀಸರು ಅವರ ಮನೆ ಬಾಗಿಲಿಗೆ ಹೋಗಿ ದಂಡ ವಸೂಲಿ ಮಾಡುವ ಹೊಸ ಪ್ರಯತ್ನ ಆರಂಭಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿರುವ ಸಂಚಾರ ವಿಭಾಗದ ಜಂಟಿ ಕಮಿಷನರ್ ಎಂ.ಎನ್. ಅನುಚೇತ್, ಸಂಚಾರ ನಿಯಮ ಉಲ್ಲಂಘನೆ ಪತ್ತೆ ಹಚ್ಚಲು ಸಾಕಷ್ಟು ಕ್ರಮಗಳನ್ನು ಕೈಗೊಳ್ಳಲಾಗಿದೆ. ಬಹುತೇಕ ರಸ್ತೆಗಳಲ್ಲಿ ಗುಣಮಟ್ಟದ ಕೆಮರಾಗಳನ್ನು ಅಳವಡಿಸಲಾಗಿದೆ. ಇದರಿಂದ ಯಾರಾದರೂ ನಿಯಮ ಉಲ್ಲಂಘನೆ ಮಾಡಿದರೆ ಫೋಟೊ ಸಮೇತ ಪ್ರಕರಣ ದಾಖಲಾಗುತ್ತಿದೆ ಎಂದುತಿಳಿಸಿದ್ದಾರೆ.
ದಂಡ ಪಾವತಿ ಮೇಲೆ ಇತ್ತೀಚೆಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗಿತ್ತು. ಈ ಸಂದರ್ಭದಲ್ಲಿ ಹಲವರು ದಂಡ ಪಾವತಿಸಿದ್ದಾರೆ. ಆದರೆ, ಇನ್ನೂ ಕೆಲವರು ಪಾವತಿ ಮಾಡಿಲ್ಲ. ಹೀಗಾಗಿ ಮನೆ ಬಾಗಿಲಿಗೆ ಹೋಗಿ ದಂಡ ಸಂಗ್ರಹಿಸಲಾಗುತ್ತಿದೆ ಎಂದು ಹೇಳಿದರು.