ಬಂಗಾರಪೇಟೆ : ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಗಡಿ ಭಾಗದ ಗ್ರಾಮಗಳಲ್ಲಿ ಕಾಡು ಹಂದಿಗಳ ಕಾಟದಿಂದ ರೈತರು ಬೆಳೆದ ಬೆಳೆಗಳು ನಾಶವಾಗುತ್ತಿದ್ದು, ರೈತರ ಪಾಲಿಗೆ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ಬಂಗಾರಪೇಟೆ ತಾಲೂಕಿನ ಕಾಮಸಮುದ್ರ ಹೋಬಳಿಯ ಗಡಿ ಭಾಗದ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಗ್ರಾಮಗಳಲ್ಲಿ ಆನೆ, ಹಂದಿ, ಜಿಂಕೆ, ನವಿಲು ಮುಂತಾದ ಪ್ರಾಣಿಗಳ ಕಾಟ ವಿಪರೀತವಾಗಿದೆ.
ಕಾಡಂಚಿನ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ಕಾಡು ಹಂದಿಗಳು ಸುಳಿದಾಡುತ್ತಿದ್ದು, ರಾತ್ರಿ ಹೊತ್ತು ರೈತರ ಜಮೀನುಗಳಲ್ಲಿ ಆಹಾರಕ್ಕಾಗಿ ಹುಡುಕಾಡುತ್ತಾ ಕಾಲ ಕಳೆಯುತ್ತವೆ ಬೆಳಗ್ಗೆ ಕಾಡಿನೊಳಗೆ ಹೋಗುತ್ತವೆ ಎಂದು ರೈತರು ಕಣ್ಣೀರನ್ನು ಹಾಕಿದ್ದಾರೆ.
ಬತ್ತಲಹಳ್ಳಿ, ಮಲ್ಲೇಶಪಾಳ್ಯ, ಕದಿರಿನತ್ತ, ಸಾಕರಸನಹಳ್ಳಿ, ದೋಣಿಮಡುಗು, ಬಲಮಂದೆ, ಗುಲ್ಲಹಳ್ಳಿ ಗ್ರಾಮಗಳಲ್ಲಿ ಹಂದಿಗಳ ಕಾಟ ಮೀತಿಮಿರಿದೆ. ಹಂದಿಗಳಿಂದ ಬೆಳೆ ಹಾನಿಯಾದರೆ ಅರಣ್ಯ ಇಲಾಖೆ ಪರಿಹಾರ ನೀಡುವುದಿಲ್ಲ. ಇದರಿಂದಾಗಿ ರೈತರು ಕೃಷಿ ಮಾಡುವುದಕ್ಕೆ ಹಿಂಜರಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.