ಬೆಂಗಳೂರು:- ದೇಶದ ಐಟಿ ವಲಯಕ್ಕೆ ಬೆಂಗಳೂರು ಕೊಡುಗೆ ಅಪಾರ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ರಾಜ್ಯ ವ್ಯಾಪಿ ಹೊಸ ಐಟಿ ಆಧಾರಿತ ಕೈಗಾರಿಕೆಗಳನ್ನು ಸ್ಥಾಪಿಸಲು ಅಗತ್ಯವಿರುವ ಎಲ್ಲ ಸಹಾಯ ಮತ್ತು ಮೂಲಸೌಕರ್ಯ ಸೌಲಭ್ಯಗಳನ್ನು ಒದಗಿಸಿ ಉತ್ತೇಜಿಸಲಾಗುವುದು ಎಂದರು.
ಬೆಂಗಳೂರು ಐಟಿ ವಲಯದ ರಾಜಧಾನಿ. ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಅವರು ಪೇಟೆಗಳನ್ನು ನಿರ್ಮಾಣ ಮಾಡಿದ್ದು, ಇದು ಅಂದಿನ ಕಾಲದ ತಾಂತ್ರಿಕ ವಿನ್ಯಾಸ. ಈಗ ವಿಶೇಷ ಆರ್ಥಿಕ ವಲಯಗಳನ್ನಾಗಿ ವಿಂಗಡಿಸಲಾಗಿದೆ. ಇನ್ನೂ,ಆತ್ಮನಿರ್ಭರ ಭಾರತಕ್ಕೆ ಕರ್ನಾಟಕವೂ ಸಾಕಷ್ಟು ಬೆಂಬಲ ಸೂಚಿಸಿದೆ. ದೇಶದ ಐಟಿ ವಲಯಕ್ಕೆ ಬೆಂಗಳೂರು ಸಾಕಷ್ಟು ಕೊಡುಗೆ ನೀಡಿದೆ ಎಂದು ಹೇಳಿದರು.
ಐಟಿ ವಲಯದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳಲ್ಲಿ ಕಂಪೆನಿಗಳು ತೊಡಗಿಸಿಕೊಂಡಿವೆ ಎಂದ ಅವರು, ಭವಿಷ್ಯದ ಸವಾಲುಗಳನ್ನು ಮತ್ತು ನಿರಂತರವಾಗಿ ಬದಲಾಗುತ್ತಿರುವ ತಂತ್ರಜ್ಞಾನವನ್ನು ಎದುರಿಸಲು, ಕಾಲೇಜುಗಳಲ್ಲಿನ ಮಾನವ ಸಂಪನ್ಮೂಲವನ್ನು ಹೆಚ್ಚು ಉದ್ಯೋಗಾರ್ಹ ಮತ್ತು ತಾಂತ್ರಿಕವಾಗಿ ಮಾಡಲು ಹೊಸ ನೀತಿಗಳನ್ನು ರೂಪಿಸಲು ರಾಜ್ಯ ಸರಕಾರ ದೇಶದಲ್ಲಿ ಮೊದಲ ಬಾರಿಗೆ ರಾಜ್ಯದಲ್ಲಿ ಉನ್ನತ ಕೌಶಲ್ಯ ಸಲಹಾ ಸಮಿತಿಯನ್ನು ಸ್ಥಾಪಿಸಿದೆ ಎಂದು ತಿಳಿಸಿದರು.