ಬೆಂಗಳೂರು:- ರಾಜ್ಯದ ಹಲವು ಜಿಲ್ಲೆಗಳಲ್ಲಿ ಡಿ. 17ರಿಂದ ವ್ಯಾಪಕ ಮಳೆ ಆಗಲಿದೆ ಎಂದು ಭಾರತೀಯ ಹವಮಾನ ಇಲಾಖೆ ಮಾಹಿತಿ ನೀಡಿದೆ.
ದಕ್ಷಿಣ ಒಳನಾಡು ಜಿಲ್ಲೆಗಳಾದ ಚಾಮರಾಜನಗರ, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳು, ಹಾಸನ, ಚಿಕ್ಕಮಗಳೂರು, ಮೈಸೂರು, ರಾಮನಗರ ಈ ಜಿಲ್ಲೆಗಳಲ್ಲಿ ದಿನ ಬಿಟ್ಟು ದಿನ ಮಳೆ ಆಗಲಿದೆ. ಒಂದೆರಡು ಕಡೆಗಳಲ್ಲಿ ಸಾಧಾರಣಕ್ಕಿಂತ ಅತ್ಯಧಿಕ ಪ್ರಮಾಣ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಸದ್ಯ ಕರ್ನಾಟಕದಲ್ಲಿ ಅಲ್ಲಲ್ಲಿ ಹಿಂಗಾರು ಮಳೆ ಚುರುಕುಗೊಳ್ಳುವ ಜೊತೆಗೆ ಚಳಿ ಹೆಚ್ಚಾಗುವ ಮುನ್ಸೂಚನೆ ದೊರೆತಿದೆ. ಉತ್ತರ ಒಳನಾಡಿನಲ್ಲಿ ಈ ವಾರಪೂರ್ತಿ ಶುಷ್ಕ ವಾತಾವರಣವೇ ಮುಂದುವರಿಯಲಿದೆ. ಹೀಗಿದ್ದರೂ ಈ ಭಾಗದಲ್ಲಿ ಚಳಿಯ ಪ್ರಮಾನ ಹೆಚ್ಚಿರಲಿದೆ ಎಂದು ವರದಿ ತಿಳಿಸಿದೆ.
ಹವಾಮಾನ ಇಲಾಖೆ ವರದಿ ಪ್ರಕಾರ, ರಾಜ್ಯದ ಬಹುತೇಕ ಕಡೆ ಗರಿಷ್ಠ ತಾಪಮಾನ ಮತ್ತು ಕನಿಷ್ಠ ತಾಪಮಾನ ಇಳಿಕೆ ಆಗಿದೆ. ಹೀಗಾಗಿ ಚಳಿಗಾಲ ಆರಂಭವಾದ ಅನುಭವವಾಗುತ್ತಿದೆ.
ಬೆಳಗಾವಿ ವಿಮಾನ ನಿಲ್ದಾಣ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಕಲಬುರಗಿ, ಕೊಪ್ಪಳ ರಾಯಚೂರು ಭಾಗದಲ್ಲಿ 17 ಡಿಗ್ರಿ ಸೆಲ್ಸಿಯಸ್ಗಿಂತಲೂ ಕಡಿಮೆ ತಾಪಮಾನ ದಾಖಲಾಗಿದೆ. ವಿಜಯಪುರದಲ್ಲಿ 12, ಚಿಕ್ಕಮಗಳೂರಿನಲ್ಲಿ 15 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಈ ಮೂಲಕ ಬೆಂಗಳೂರು ನಗರ ಸೇರಿದಂತೆ ರಾಜ್ಯದ ಒಳನಾಡು ಭಾಗದಲ್ಲಿ ಚಳಿ ಆವರಿಸುತ್ತಿದೆ. ದಿನೇ ದಿನೇ ವಾತಾವರಣದಲ್ಲಿನ ತಂಪು ಹೆಚ್ಚಾಗುತ್ತಿದೆ.
ಬೆಂಗಳೂರಿನಲ್ಲಿ ಸದ್ಯಕ್ಕೆ ಮಳೆಯ ಯಾವ ಮುನ್ಸೂಚನೆ ಇಲ್ಲ. ಬದಲಾಗಿ ಇಲ್ಲಿ ಸಹ ತಾಪಮಾನ ತೀವ್ರಗತಿಯಲ್ಲಿ ಇಳಿಕೆ ಕಂಡು ಬಂದಿದೆ