ಅಯೋಧ್ಯೆ:-ರಾಮ ಮಂದಿರದಲ್ಲಿ ಪ್ರಾಣ ಪ್ರತಿಷ್ಠೆಗೆ ಕ್ಷಣಗಣನೆ ಶುರುವಾಗಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ನೂರಾರು ಗಣ್ಯರು ಸಮಾರಂಭದಲ್ಲಿ ಭಾಗವಹಿಸುತ್ತಿದ್ದು, ದೇಶದಾದ್ಯಂತ ಸಂಭ್ರಮಾಚರಣೆ ನಡೆಯುತ್ತಿದೆ.
ಪ್ರಾಣ ಪ್ರತಿಷ್ಠಾಪನೆಯ ಶುಭ ಮುಹೂರ್ತ ಮಧ್ಯಾಹ್ನ 12.29 ರಿಂದ 12.30 ರವರೆಗೆ ಇರಲಿದೆ. ಪ್ರಾಣ ಪ್ರತಿಷ್ಠಾಪನೆಯ ಶುಭ ಸಮಯ ಕೇವಲ 84 ಸೆಕೆಂಡುಗಳು ಮಾತ್ರ ಇರಲಿದೆ. ಪೂಜಾ ವಿಧಿವಿಧಾನಗಳನ್ನು ದೇಶದ ಜನರ ಪ್ರತಿನಿಧಿಯಾಗಿ ಪ್ರಧಾನಿ ನರೇಂದ್ರ ಮೋದಿ ನೆರವೇರಿಸಲಿದ್ದಾರೆ.
ಬೆಳಗ್ಗೆ 10.45ಕ್ಕೆ ಅಯೋಧ್ಯೆಯ ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹೆಲಿಪ್ಯಾಡ್ಗೆ ತಲುಪಲಿರುವ ಪ್ರಧಾನಿ ನರೇಂದ್ರ ಮೋದಿ 10.55ಕ್ಕೆ ಹೆಲಿಕಾಪ್ಟರ್ನಲ್ಲಿ ಶ್ರೀರಾಮ ಮಂದಿರ ತಲುಪಲಿದ್ದಾರೆ. ಬೆಳಗ್ಗೆ 11ರಿಂದ ಮಧ್ಯಾಹ್ನ 12 ಗಂಟೆವರೆಗೂ ಸಮಯ ಕಾಯ್ದಿರಿಸಲಾಗಿದೆ. ಮಧ್ಯಾಹ್ನ 12.05-12.55ರವರೆಗೆ ಪ್ರಾಣಪ್ರತಿಷ್ಠಾಪನೆ ಕಾರ್ಯದಲ್ಲಿ ಭಾಗಿಯಾಗಲಿದ್ದಾರೆ. ಮಧ್ಯಾಹ್ನ 12.55ಕ್ಕೆ ಪೂಜಾ ಸ್ಥಳದಿಂದ ಹೊರಡಲಿರುವ ಪ್ರಧಾನಿ ಮೋದಿ ಮಧ್ಯಾಹ್ನ 1 ಗಂಟೆಗೆ ಸಾರ್ವಜನಿಕ ಕಾರ್ಯಕ್ರಮ ನಡೆಯುವ ಸ್ಥಳಕ್ಕೆ ತಲುಪಲಿದ್ದಾರೆ. ಮಧ್ಯಾಹ್ನ 2 ಗಂಟೆವರೆಗೆ ಸಾರ್ವಜನಿಕ ಕಾರ್ಯಕ್ರಮ ಸ್ಥಳದಲ್ಲಿರುವ ಮೋದಿ, ಮಧ್ಯಾಹ್ನ 2.10ಕ್ಕೆ ಕುಬೇರ್ ತಿಲಾಗೆ ಭೇಟಿ ನೀಡಲಿದ್ದಾರೆ.
ಅಯೋಧ್ಯೆಯಲ್ಲಿ ಇಂದು ಬಾಲರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭಕ್ಕೆ ಆಹ್ವಾನ ಪಡೆದಿರುವ ಅತಿಥಿಗಳು ಬೆಳಗ್ಗೆ 10.30ರೊಳಗೆ ಮಂದಿರದ ಆವರಣ ಪ್ರವೇಶಿಸಬೇಕು. ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ನೀಡಿರುವ ಕಾರ್ಡ್ ಇದ್ದರೆ ಮಾತ್ರ ದೇವಾಲಯಕ್ಕೆ ಎಂಟ್ರಿ ಸಿಗಲಿದೆ. ಎಂಟ್ರಿ ಕಾರ್ಡ್ನಲ್ಲಿರುವ ಕ್ಯೂಆರ್ ಕೋಡ್ ಹೊಂದಾಣಿಕೆ ಬಳಿಕವೇ ಮಂದಿರದೊಳಕ್ಕೆ ಪ್ರವೇಶ ಪಡೆಯಬಹುದಾಗಿದೆ.
ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ರಾಮ ಮಂದಿರದಲ್ಲಿ ರಾಮ ಲಲ್ಲಾ ಪ್ರಾಣ ಪ್ರತಿಷ್ಠೆಗೆ ಎಲ್ಲ ಸಿದ್ಧತೆಗಳು ನಡೆದಿವೆ. ಅಯೋಧ್ಯಾ ನಗರವು ಸಂಪೂರ್ಣವಾಗಿ ಅಲಂಕರಿಸಲ್ಪಟ್ಟಿದೆ. 500ಕ್ಕೂ ಹೆಚ್ಚು ವರ್ಷಗಳ ಹಿಂದೂಗಳ ಕಾಯುವಿಕೆ ಇಂದು ಕೊನೆಗೊಳ್ಳುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಜನಪ್ರಿಯ ಕ್ರಿಕೆಟಿಗರು, ಕೈಗಾರಿಕೋದ್ಯಮಿಗಳು, ಸಂತರು, ಸೆಲೆಬ್ರಿಟಿಗಳು ಮತ್ತು ವಿವಿಧ ದೇಶಗಳ ಪ್ರತಿನಿಧಿಗಳನ್ನು ರಾಮ ಲಲ್ಲಾ ಪ್ರಾಣ ಪ್ರತಿಷ್ಠಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಆಹ್ವಾನಿಸಲಾಗಿದೆ. ಅಮೆರಿಕ ಮತ್ತು ಯುಕೆ ಸೇರಿದಂತೆ ವಿವಿಧ ದೇಶಗಳಲ್ಲಿ ಪ್ರಾಣ ಪ್ರತಿಷ್ಠೆಯ ಸಂದರ್ಭದಲ್ಲಿ ಆಚರಣೆಗಳು ಮತ್ತು ಆಚರಣೆಗಳು ನಡೆಯುತ್ತವೆ. ಭಾರತದಲ್ಲಿ ದೇಶದಾದ್ಯಂತ ವಿವಿಧ ಕಾರ್ಯಕ್ರಮಗಳನ್ನು, ಆಚರಣೆಗಳನ್ನು ಹಮ್ಮಿಕೊಳ್ಳಲಾಗಿದೆ.
ನಾಳೆ ಬೆಳಗ್ಗೆಯಿಂದ ರಾಮ ಮಂದಿರದಲ್ಲಿ ಸಾರ್ವಜನಿಕರು ರಾಮ ಲಲ್ಲಾನ ದರ್ಶನ ಪಡೆಯಬಹುದಾಗಿದೆ.