ನ್ಯಾ. ಎ ಜೆ ಸದಾಶಿವ ಆಯೋಗದ ಒಳ ಮೀಸಲಾತಿ ವರದಿಯನ್ನ ಬೆಳಗಾವಿ ಅಧಿವೇಶನದ ಎರಡು ಸದನಗಳಲ್ಲಿ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ದಲಿತ ಸಂಘಟನೆಗಳ ಮಹಾ ಒಕ್ಕೂಟ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾತು ತಪ್ಪಿದೆ ಎಂದು ಮಹಾ ಒಕ್ಕೂಟದ ಅಧ್ಯಕ್ಷ ಹೆಚ್. ಮಲ್ಲೇಶ್ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದಾವಣಗೆರೆಯಲ್ಲಿ ಸುದ್ದಿಗೋಷ್ಟಿ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಎಚ್ .ಮಲ್ಲೇಶ್, ಹಿಂದೆ ಚುನಾವಣೆ ಪ್ರಚಾರದ ವೇಳೆ ಚಿತ್ರದುರ್ಗದಲ್ಲಿ ಪರಿಶಿಷ್ಟರ ಮೀಸಲಾತಿ ಹೆಚ್ಚಳ ಹಾಗೂ ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಅಂಗೀಕಾರದ ಬಗ್ಗೆ ಪ್ರಣಾಳಿಕೆ ಯಲ್ಲಿ ಪ್ರಕಟಿಸಿದ್ದರು. ಅಲ್ಲದೆ, ನಮ್ಮ ಸರ್ಕಾರ ಅಸ್ತಿತ್ವಕ್ಕೆ ಬಂದ ಮೊದಲ ಅಧಿವೇಶನದಲ್ಲಿಯೇ ಜಾರಿ ಮಾಡುವ ಭರವಸೆಯನ್ನು ನೀಡಿದ್ದರು. ಆದರೆ, ಸಿದ್ದರಾಮಯ್ಯ ಆ ರೀತಿ ಮಾಡಿಲ್ಲ. ಈಗ ಬೆಳಗಾವಿಯಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಜಾರಿ ಮಾಡಿರುವ ಭರವಸೆಯನ್ನ ನೀಡಿದ್ದು, ಅದರಂತೆ ಈ ಅಧಿವೇಶನದಲ್ಲಿ ಎರಡು ಸದನಗಳಲ್ಲಿ ಅಂಗೀಕರಿಸಿ ನುಡಿದಂತೆ ನಡೆಯಬೇಕು ಎಂದು ಒತ್ತಾಯವನ್ನ ಮಾಡಿದ್ದಾರೆ.
ಒಳ ಮೀಸಲಾತಿ ವಿಚಾರದಲ್ಲಿ ವಿರೋಧ ಮಾಡುವವರು ಬಹಿರಂಗವಾಗಿ ಹೇಳಿಕೆಗಳನ್ನ ನೀಡುತ್ತಿದ್ದಾರೆ. ಆದರೆ, ಒಳ ಮೀಸಲಾತಿಗೆ ಬೆಂಬಲ ನೀಡುವ ನಮ್ಮವರೇ ಮುನಿಯಪ್ಪ ಮತ್ತು ಸಚಿವರಾಗಿರುವ ಜಿ. ಪರಮೇಶ್ವರನಂತವರು ಈ ಬಗ್ಗೆ ಮರೆಗೆ ನಿಂತು ಮಾತನಾಡುತ್ತಿದ್ದಾರೆ. ಇದರಲ್ಲಿಯೇ ಗೊತ್ತಾಗುತ್ತದೆ ಇವರು ಯಾವ ರೀತಿ ಬೆಂಬಲ ನೀಡುತ್ತಿದ್ದಾರೆ ಎಂದು. ಒಳ ಮೀಸಲಾತಿ ಜಾರಿ ತಡೆಯಬೇಕು ಎನ್ನುವವರು ಬೆಳಗಾವಿ ಅಧಿವೇಶನದಲ್ಲಿ ಪ್ರಯತ್ನ ನಡೆಸಿರುವುದು ಎದ್ದು ಕಾಣುತ್ತಿದೆ. ನಾವು ಕೇಳುತ್ತಿರುವುದು ಸಾಂವಿಧಾನಿಕ ಹಕ್ಕಾಗಿದ್ದು, ಸಾಂವಿಧಾನಿಕ ಸೌಲತ್ತುಗಳು ಸರ್ವರಿಗೂ ಸಮಾನವಾಗಿ ಸಿಗಬೇಕು. ಅವು ಜನಸಂಖ್ಯೆ ಆಧಾರದ ಮೇಲೆ ಹಂಚಿಕೆಯಾಗಬೇಕು ಎಂದು ಆಗ್ರಹವನ್ನ ಮಾಡಿದ್ದಾರೆ.
ಸಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ಪರಿಶಿಷ್ಟರಲ್ಲೆ ಬಹು ಸಂಖ್ಯಾತರಾದ ಅಸ್ಪೃಶ್ಯ ಸಮುದಾಯಗಳಿಗೆ ಸಾಮಾಜಿಕ ನ್ಯಾಯ ಕೇವಲ ಹುಸಿ ಭರವಸೆಯಲ್ಲಿಯೇ ಕಾಲಹರಣ ಮಾಡುತ್ತಿರುವುದು ವಂಚಿತ ಸಮುದಾಯಗಳ ಬೇಸರಕ್ಕೆ ಕಾರಣವಾಗಿದೆ. ಸಿದ್ದರಾಮಯ್ಯನವರು ಈ ಅಧಿವೇಶನದಲ್ಲಿ ಅಂಗೀಕರಿಸಿ ನುಡಿದಂತೆ ನಡೆಯಬೇಕು ಎಂದು ಒತ್ತಾಯ ಮಾಡಿದ್ದು, ಇಲ್ಲದಿದ್ದರೆ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುವ ಎಚ್ವರಿಕೆಯನ್ನ ಕೂಡ ನೀಡಿದ್ದಾರೆ.