ಹುಬ್ಬಳ್ಳಿ : ಧಾರವಾಡ ತಾಲ್ಲೂಕು ಬೇಲೂರು ಗ್ರಾಮದಲ್ಲಿ ಸೃಜಿಸಲು ಉದ್ದೇಶಿಸಿದ್ದ ಭಾರತ ಮೀಸಲು ಪಡೆ (ಐಆರ್ಬಿ) ಘಟಕದ ಪ್ರಸ್ತಾವನೆಯನ್ನು ಕೈಬಿಟ್ಟು ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಘಟಕವನ್ನು ಸ್ಥಾಪಿಸುವ ತೀರ್ಮಾನವನ್ನು ಪುನರ ಪರಿಶೀಲಿಸುವಂತೆ ವಿಧಾನಸಭೆಯ ಪ್ರತಿಪಕ್ಷ ಉಪ ನಾಯಕ ಅರವಿಂದ ಬೆಲ್ಲದ ಆಗ್ರಹಿಸಿದ್ದಾರೆ.
ಕಳ್ಳರಿಂದ ಚಿನ್ನ ಖರೀದಿ; ಅಟ್ಟಿಕಾ ಗೋಲ್ಡ್ ಕಂಪೆನಿ ಮಾಲೀಕ ಮತ್ತೊಮ್ಮೆ ಅರೆಸ್ಟ್..!
ಬೇಲೂರು ಗ್ರಾಮದಲ್ಲಿ ಐಆರ್ಬಿಯನ್ನು ಹೊಸದಾಗಿ ಸೃಜಿಸಲು ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ 52.04 ಎಕರೆ ಜಮೀನು ಸಹ ಮಂಜೂರಾಗಿತ್ತು. ಈ ಜಮೀನನ್ನು ಈಗಾಗಲೇ ಕಮಾಂಡೆಂಟ್, 2 ನೇ ಪಡೆ, ಕೆಎಸ್ಆರ್ಪಿ ಘಟಕದ ಅಧೀನದಲ್ಲಿದ್ದು, ಹೊಸದಾಗಿ ಐಆರ್ಬಿ ಘಟಕವನ್ನು ಸೃಜಿಸಲು ಈಗಾಗಲೇ ಸ್ಥಳ ಸಿದ್ಧವಿರುತ್ತದೆ.
ಕೇಂದ್ರ ಸರ್ಕಾರವು ಕರ್ನಾಟಕ ರಾಜ್ಯದಲ್ಲಿ ಹೊಸದಾಗಿ 2 ಭಾರತ ಮೀಸಲು ಪಡೆ ಘಟಕಗಳನ್ನು ಸ್ಥಾಪಿಸಲು ಅನುಮತಿ ನೀಡಿದೆ. ಈ ಹಿನ್ನಲೆಯಲ್ಲಿ ಪೊಲೀಸ್ ಇಲಾಖೆಯಿಂದ 2 ಹೊಸ ಘಟಕಗಳನ್ನು ಹೊಸದಾಗಿ ಸ್ಥಾಪಿಸಲು ಬೆಂಗಳೂರಿನ ದೇವನಹಳ್ಳಿಯ ಆವತಿಯಲ್ಲಿ 1 ಘಟಕವನ್ನು ಹಾಗೂ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ 1 ಘಟಕವನ್ನು ಸೃಜಿಸಲು ಸ್ಥಳ ಪರಿಶೀಲನೆಯನ್ನು ನಡೆಸಿ ಈಗಾಗಲೇ ಪ್ರಸ್ತಾವನೆಯನ್ನು ಸರ್ಕಾರದ ಒಳಾಡಳಿತ ಇಲಾಖೆಯ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಲಾಗಿದೆ.
ಬೇಲೂರಿನಲ್ಲಿ ಸ್ಥಾಪಿಸಬೇಕಾದ ಈ ಘಟಕದ ಪ್ರಸ್ತಾವನೆಯನ್ನು ಮಾರ್ಪಡುಗೊಳಿಸಿ/ರದ್ದುಗೊಳಿಸಿ ಕೋಲಾರ ಜಿಲ್ಲೆಯ ಬಂಗಾರಪೇಟೆಯಲ್ಲಿ ಹೊಸದಾಗಿ ಸ್ಥಾಪಿಸಲು ಪ್ರಸ್ತಾವನೆಯನ್ನು ಪೊಲೀಸ್ ಇಲಾಖೆಯಿಂದ ಸಲ್ಲಿಸಿರುವುದು ಸರಿಯಷ್ಠೆ. ಆದರೆ ಸದರಿ ಸ್ಥಳದಲ್ಲಿ ಸ್ಥಾಪಿಸಿದ್ದಲ್ಲಿ ಯಾವುದೇ ರೀತಿಯಲ್ಲಿಯೂ ಉಪಯೋಗಕ್ಕೆ ಇರುವುದಿಲ್ಲ.
ಘಟಕ ಸ್ಥಾಪಿಸಲು ಉದ್ದೇಶಿಸಿದ್ದ ಬೇಲೂರಲ್ಲಿನ ಜಮೀನನಲ್ಲಿ ಗಾರ್ಡ್ ರೂಂ, ಸುತ್ತಲು ತಂತಿ ಬೇಲಿ ಮತ್ತು ಬೋರ್ವೆಲ್ ಅಳವಡಿಸಿ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿರುತ್ತದೆ. ಕಾನೂನು ಸುವ್ಯವಸ್ಥೆ ದೃಷ್ಠಿಯಿಂದ ಅನುಕೂಲಕರ. ಬೆಳಗಾವಿಯಲ್ಲಿ ಕೆಎಸ್ಆರ್ಪಿಯ 1 ಘಟಕವಿದ್ದು, ಅಲ್ಲದೇ ಸುವರ್ಣ ಸೌಧವಿದೆ. ಅಧಿವೇಶನ ಸಂದರ್ಭ, ರೈತರ ಪ್ರತಿಭಟನೆಗಳು, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ಗಡಿ, ಭಾಷಾ ವಿವಾದ, ಜಲವಿವಾದ, ನೆರೆ ಹಾವಳಿ, ಕೋಮುಗಲಭೆಗಳು ಹೀಗೆ ಹಲವಾರು ಸಂದರ್ಭಗಳಲ್ಲಿ ಕಾನೂನು ಸುವ್ಯವಸ್ಥೆಗೆ ಹೊರ ಘಟಕಗಳಿಂದ ಬಂದೋಬಸ್ತ್ಗೆ ತುಕಡಿಗಳನ್ನು ನಿಯೋಜಿಸಲಾಗುತ್ತಿದೆ.
ಇದರಿಂದ ಆರ್ಥಿಕವಾಗಿ ಸರ್ಕಾರಕ್ಕೆ ನಷ್ಠ ಉಂಟಾಗುವುದನ್ನು ತಪ್ಪಿಸಬಹುದು. ಧಾರವಾಡ ಜಿಲ್ಲೆಯು ಬೆಂಗಳೂರು ಮಹಾನಗರದಂತೆ ಬೆಳೆಯುತ್ತಿದ್ದು, ಇಲ್ಲಿ ವಿಮಾನ ನಿಲ್ದಾಣ, ಹೈಕೋಟ್ ಸಂಚಾರಿ ಪೀಠ ಹಾಗೂ ೩ ವಿಶ್ವವಿದ್ಯಾಲಯ ಹಾಗೂ ಐ.ಐ.ಟಿ ಸಹ ಹೊಂದಿರುತ್ತದೆ. ಅಲ್ಲದೇ ಬೃಹತ್ ಉದ್ಯಮಗಳು / ಕೈಗಾರಿಕೆಗಳು ಹೊಂದಿದ್ದು, ಕೋಮು ಸೂಕ್ಷ್ಮ ಪ್ರದೇಶವಾಗಿದೆ.
ಧಾರವಾಡದಲ್ಲಿ ಸ್ಥಾಪಿಸುವುದರಿಂದ ಘಟಕದಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿ/ಸಿಬ್ಬಂದಿ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲಕರವಾಗಲಿದೆ. ಇಂತಹ ಸೂಕ್ತ ಸ್ಥಳ ಕೈಬಿಟ್ಟು ಬಂಗಾರಪೇಟೆಯಲ್ಲಿ ಘಟಕ ಸ್ಥಾಪಿಸುವುದು ಸರಿಯಲ್ಲ. ಆದ್ದರಿಂದ ಸರಕಾರ ತನ್ನ ತೀರ್ಮಾನವನ್ನು ಪುನರ ಪರಿಶೀಲಿಸಬೇಕು ಎಂದು ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ ಅವರಿಗೆ ಬರೆದ ಪತ್ರದಲ್ಲಿ ಬೆಲ್ಲದ ಆಗ್ರಹಿಸಿದ್ದಾರೆ.