ಬರ್ನಾವಾ:- ಅರಗಿನ ಮನೆ ಸ್ಥಳ ಹಿಂದೂಗಳಿಗೆ ಸೇರಿದ್ದಾಗಿದ್ದು, ರಾಮಾಯಣ ಬಳಿಕ ಮಹಾಭಾರತ ಕೇಸಲ್ಲೂ ಹಿಂದೂಗಳಿಗೆ ಜಯ ಸಿಕ್ಕಿದೆ. ಉತ್ತರ ಪ್ರದೇಶ ಬರ್ನಾವಾದಲ್ಲಿರುವ ಬದ್ರುದ್ದೀನ್ ಗೋರಿ ಜಾಗವು ಮಹಾಭಾರತದ ಕಾಲದ ಲಕ್ಷಗೃಹ (ಅರಗಿನ ಅರಮನೆ) ಪ್ರದೇಶವಾಗಿದೆ ಎಂಬ ಹಿಂದೂ ಅರ್ಜಿದಾರರ ವಾದವನ್ನು ಜಿಲ್ಲಾ ನ್ಯಾಯಾಲಯ ಎತ್ತಿಹಿಡಿದಿದೆ.
ಇದರೊಂದಿಗೆ 53 ವರ್ಷಗಳಿಂದ ಹಿಂದೂ, ಮುಸ್ಲಿಂ ಅರ್ಜಿದಾರರ ನಡುವೆ ಜಾಗದ ವಿಷಯಕ್ಕೆ ನಡೆಯುತ್ತಿದ್ದ ಪ್ರಕರಣ ತಾರ್ಕಿಕ ಅಂತ್ಯ ಕಂಡಂತೆ ಆಗಿದೆ. ತೀರ್ಪು ಹೊರಬಿದ್ದ ಬೆನ್ನಲ್ಲೇ ಹಿಂದೂ ಸಂಘಟನೆಗಳು ಈ ಕುರಿತು ಹರ್ಷ ವ್ಯಕ್ತಪಡಿಸಿವೆ.
ಬರ್ನಾವಾದಲ್ಲಿ 36 ಎಕರೆ ಪ್ರದೇಶದಲ್ಲಿ ಶೇಖ್ ಬದ್ರುದ್ದೀನ್ ಗೋರಿ ಮತ್ತು ಬೃಹತ್ ಸ್ಥಶಾನವಿದೆ. ಈ ವಿವಾದಿತ ಜಾಗದಲ್ಲಿನ ಗುರುಕುಲ ನಮಗೆ ಬಿಡಿಸಿ ಕೊಡಬೇಕು. ಇದು ಸಂತ ಶೇಖ್ ಬದ್ರುದ್ದೀನ್ ಅವರ ಗೋರಿ ಸ್ಥಳ, ಇದನ್ನು ಒಡೆದು ಹಾಕಲಾಗಿದೆ ಎಂದು ಮುಸ್ಲಿಮರ ಪರ ಅರ್ಜಿದಾರ ಮುಕೀಂ ಖಾನ್ ವಾದಿಸಿದ್ದರು. ಆದರೆ ಈ ವಾದ ತಿರಸ್ಕರಿಸಿದ್ದ ಬ್ರಹ್ಮಚಾರಿ ಕೃಷ್ಣದತ್ತ ಈ ಜಾಗ ಮಹಾಭಾರತದ ಕಾಲದ್ದು, ಪಾಂಡವರ ಹತ್ಯೆಗೆ ದುರ್ಯೋಧನ ಕಟ್ಟಿದ ಲಕ್ಷಗೃಹ ಇದಾಗಿದೆ. ಇದನ್ನು ಮರಳಿ ತಮ್ಮ ವಶಕ್ಕೆ ನೀಡಬೇಕು ಎಂದು ವಾದಿಸಿದ್ದರು.
ಈ ಸಂಬಂಧ ಹಲವು ದಾಖಲೆಗಳನ್ನೂ ಸಲ್ಲಿಸಿದ್ದರು. ಈ ಹಿನ್ನೆಲೆಯಲ್ಲಿ ನ್ಯಾಯಾಲಯ 1952ರಲ್ಲಿ ಪುರಾತತ್ವ ಇಲಾಖೆಯಿಂದ ಸಮೀಕ್ಷೆ ನಡೆಸಲು ಆದೇಶಿಸಿತ್ತು. 2018ರಲ್ಲಿ ಸಮೀಕ್ಷೆ ಪ್ರಕ್ರಿಯೆಗೆ ಚುರುಕು ಸಿಕ್ಕಿತ್ತು. ಸಮೀಕ್ಷೆ ವೇಳೆ ಅರಮನೆಗೆ ಬೆಂಕಿ ಬಿದ್ದಾಗ ಪಾರಾಗಲು ಬಳಸಿದ್ದರು ಎನ್ನಲಾದ ಸುರಂಗ, 4500 ವರ್ಷಗಳಷ್ಟು ಹಳೆಯ ಮಣ್ಣಿನ ಪಾತ್ರೆಗಳು, ಮಾನವರ ಅಸ್ಥಿಪಂಜರ ಕುರುಹುಗಳು ಸಿಕ್ಕಿದ್ದವು. ಈ ಬಗ್ಗೆ ಪುರಾತತ್ವ ಇಲಾಖೆ ವರದಿ ಸಲ್ಲಿಸಿತ್ತು. ವರದಿ ಅನ್ವಯ, ವಕ್ಸ್ ಬೋರ್ಡ್ ವಶದಲ್ಲಿರುವ ಜಾಗವನ್ನು ಹಿಂದೂಗಳಿಗೆ ಸೇರಿದ್ದು ಎಂದು ಕೋರ್ಟ್ ತೀರ್ಪು ನೀಡಿದೆ.