ಹಾಸನ:- ಸಕಲೇಶಪುರದ ಶಿಡಗಳಲೆಯಲ್ಲಿ ಆಹಾರ ಅರಸಿ ಗ್ರಾಮಕ್ಕೆ ಬಂದಿದ್ದ ಆನೆಯೊಂದು ಪುಂಡಾಟ ನಡೆಸಿ ವಿದ್ಯುತ್ ಕಂಬವನ್ನು ಮನೆಯ ಮೇಲೆ ಉರುಳಿಸಿದ ಘಟನೆ ಜರುಗಿದೆ.
ಆನೆ ಮುಂಜಾನೆ ವೇಳೆ ಗ್ರಾಮಕ್ಕೆ ಬಂದಿದ್ದು, ಮಲ್ಲಿಕಾರ್ಜುನ್ ಎಂಬವರ ಮನೆಯ ಮುಂಭಾಗ ಇದ್ದ ವಿದ್ಯುತ್ ಕಂಬದ ಮೇಲೆ ದಾಳಿ ಮಾಡಿದೆ. ಇದರಿಂದ 440 ಕಿಲೋ ವ್ಯಾಟ್ ಸಾಮರ್ಥ್ಯದ ವಿದ್ಯುತ್ ತಂತಿ ಹಾಗೂ ಕಂಬ ಮನೆಯ ಮೇಲೆ ಬಿದ್ದಿದೆ. ಕಂಬ ಬೀಳುತ್ತಿದ್ದಂತೆ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇದರಿಂದ ದೊಡ್ಡ ಅನಾಹುತ ತಪ್ಪಿದಂತಾಗಿದೆ
ಕಂಬ ಬಿದ್ದ ಶಬ್ದಕ್ಕೆ ಮಲ್ಲಿಕಾರ್ಜನ್ ಕುಟುಂಬಸ್ಥರು ಗಾಬರಿಗೊಂಡು ಮನೆಯ ಕಿಟಕಿಯಿಂದ ನೋಡಿದ್ದಾರೆ. ಈ ವೇಳೆ ಕಾಡಾನೆ ಮನೆಯ ಮುಂಭಾಗವೇ ನಿಂತಿದ್ದು ತಕ್ಷಣ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕಳೆದ ಹದಿನೈದು ದಿನಗಳಿಂದ ಹೆಬ್ಬನಹಳ್ಳಿ, ಹೊಸಕೊಪ್ಪಲು, ಮಾಸುವಳ್ಳಿ ಭಾಗದಲ್ಲಿ ಇಪ್ಪತ್ತಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು, ಅಪಾರ ಪ್ರಮಾಣದ ಬೆಳೆ ನಾಶ ಮಾಡುವ ಜೊತೆಗೆ ವಾಸದ ಮನೆಗಳ ಮೇಲೂ ದಾಳಿ ಮಾಡುತ್ತಿವೆ ಎಂದು ಗ್ರಾಮಸ್ಥರು ದೂರಿದ್ದಾರೆ. ಅಲ್ಲದೇ ಕಾಡಾನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರಿಸ ಬೇಕು ಎಂದು ಆಗ್ರಹಿಸಿದ್ದಾರೆ.