ಚಿಕ್ಕಬಳ್ಳಾಪುರ: ಉಪನ್ಯಾಸಕ ವೈಯುಕ್ತಿಕವಾಗಿ ನನ್ನನ್ನೇ ಟಾರ್ಗೆಟ್ ಮಾಡಿ ಕಿರುಕುಳ ಕೊಟ್ಟಿದ್ದಾನೆ ಅಂತ ಆರೋಪಿಸಿ BGS ಪಾಲಿಟೆಕ್ನಿಕ್ ಡಿಪ್ಲೋಮಾ ವಿದ್ಯಾರ್ಥಿಯೊರ್ವ ಉಪನ್ಯಾಸಕನ ವಿರುದ್ದ ಸೆಲ್ಪಿ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಮಲ್ಲಹಳ್ಳಿ ಗ್ರಾಮದ ಲಲಿತಮ್ಮ ಹಾಗೂ ದೇವರಾಜು ದಂಪತಿಯ ಪುತ್ರ ಗಜೇಂದ್ರ ಆತ್ಮಹತ್ಯೆ ಮಾಡಿಕೊಂಡ ದುರ್ದೈವಿಯಾಗಿದ್ದು,
ಈತ ಚಿಕ್ಕಬಳ್ಳಾಪುರ ನಗರದ ಹೊರವಲಯದ ಎಸ್ ಜೆ ಸಿ ಐ ಟಿ ಇಂಜನಿಯರಿಂಗ್ ಕಾಲೇಜು ಕ್ಯಾಂಪಸ್ ನ ಬಿಜಿಎಸ್ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಡಿಪ್ಲೊಮಾ ಇನ್ ಮೆಕ್ಯಾನಿಕಲ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದು.. ಅದೇ ಕಾಲೇಜಿನ ಉಪನ್ಯಾಸಕ ಮಂಜುನಾಥ್ ಆತ್ಮಹತ್ಯೆ ಮಾಡಿಕೊಂಡ ಗಜೇಂದ್ರ ನಿಗೆ ವಿನಾಕಾರಣ ವೈಯುಕ್ತಿಕವಾಗಿ ಟಾರ್ಗೆಟ್ ಮಾಡಿ ಕಿರುಕುಳ ಕೊಡ್ತಿದ್ದನಂತೆ. ಪದೇ ಪದೇ ಹಲ್ಲೆ ಮಾಡುವುದು ಅಸೈನ್ ಮೆಂಟ್ ಬುಕ್ ಹರಿದು ಹಾಕುವುದು ಸೇರಿದಂತೆ ಎಲ್ಲ ವಿದ್ಯಾರ್ಥಿಗಳ ಎದುರೇ ಮರ್ಯಾದೆ ತೆಗೆದಿದ್ದನಂತೆ.
ಹೀಗಾಗಿ ಉಪನ್ಯಾಸಕ ಮಂಜುನಾಥ್ ವಿರುದ್ದ ಸೆಲ್ಪಿ ವಿಡಿಯೋ ಮಾಡಿ ಅಳಲು ತೋಡಿಕೊಂಡಿರುವ ಗಜೇಂದ್ರ ನನ್ನ ಸಾವಿಗೆ ಮಂಜುನಾಥ್ ಕಾರಣ…ನನ್ನ ಮರ್ಯಾದೆ ಹೋಯ್ತು ಅದೇ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅಂತ ವಿಡಿಯೋ ರೆಕಾರ್ಡ್ ಮಾಡಿದ್ದಾನೆ. ಇನ್ನೂ ಬುಧವಾರ ರಾತ್ರಿ ಒಂದು ವಿಡಿಯೋ ಹಾಗೂ ಗುರುವಾರ ಬೆಳಿಗ್ಗೆ ಮತ್ತೊಂದು ವಿಡಿಯೋ ಸೇರಿದಂತೆ ಎರಡು ವಿಡಿಯೋ ಮಾಡಿ ಮನೆಯ ಮುಂಭಾಗದ ಹಳೆಯ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾನೆ.
ಇನ್ನೂ ಆತ್ಮಹತ್ಯೆ ಯಾಕೆ ಮಾಡಿಕೊಂಡ ಎಂಬುದನ್ನು ಅರಿಯದ ಪೋಷಕರು ಮೃತನನ್ನ ಮಣ್ಣು ಮಾಡಿ ಸುಮ್ಮನಾಗಿದ್ದಾರೆ. ಆದ್ರೆ ಇಂದು ಬೆಳಿಗ್ಗೆ ಮೃತ ಗಜೇಂದ್ರ ಮೊಬೈಲ್ ಪರಿಶೀಲನೆ ಮಾಡಿದಾಗ ಸೆಲ್ಪಿ ವಿಡಿಯೋ ಪತ್ತೆಯಾಗದ್ದು ಸಾವಿನ ಸತ್ಯ ಬಯಲಾಗಿದೆ. ಹೀಗಾಗಿ ಮೃತ ಗಜೇಂದ್ರ ಪೋಷಕರು ಸಂಬಂಧಿಕರು ಬಿಜಿಎಸ್ ಪಾಲಿಟೆಕ್ನಿಕ್ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರಾಂಶುಪಾಲರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ನಂದಿಗಿರಿಧಾಮ ಪೊಲೀಸರು ಹಾಗೂ ಪ್ರತಿಭಟನಕಾರರ ವಾಗ್ವಾದ ನಡೆದಿದೆ. ಕೂಡಲೇ ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುವಂತೆ ಈ ಸಂದರ್ಭದಲ್ಲಿ ಆಗ್ರಹಿಸಿದ್ರು..