ಬಹುಭಾಷಾ ನಟಿ ಸೌಂದರ್ಯ ನಿಧನರಾಗಿ ಸಾಕಷ್ಟು ವರ್ಷಗಳೆ ಕಳೆದು ಹೋಗಿದೆ. ಇಂದಿಗೂ ಲಕ್ಷಾಂತರ ಮಂದಿ ಆಕೆಯನ್ನು ನೆನಪು ಮಾಡಿಕೊಳ್ಳುತ್ತಾರೆ. ಸೌಂದರ್ಯ ಮೃತಪಟ್ಟ ವೇಳೆ ಟಾಲಿವುಡ್ ನಟ ಜಗಪತಿ ಬಾಬು ಅವರಿಗೆ ಅಳಬೇಕು ಅಂತ ಅನ್ನಿಸಿಲ್ಲವಂತೆ. ಅಂದು ಅವರಿಗೆ ನಟಿಯ ಸಾವಿಗಿಂತ ಬೇರೆ ವಿಷಯಗಳು ಹೆಚ್ಚು ನೋವನ್ನುಂಟು ಮಾಡಿದ್ದವು ಎಂದು ಸಂದರ್ಶನದದಲ್ಲಿ ಹೇಳಿಕೊಂಡಿದ್ದರು.
ಸೌಂದರ್ಯಾ ಎಲ್ಲಾ ಭಾಷೆಯ ಚಿತ್ರಗಳಲ್ಲೂ ಸ್ಟಾರ್ ನಟರ ಜೊತೆ ನಟಿಸಿದ್ದರು. ಅದರಲ್ಲಿಯೂ ಖ್ಯಾತ ನಟ ಜಗಪತಿ ಬಾಬು ಮತ್ತು ಸೌಂದರ್ಯ ಸಾಕಷ್ಟು ಆಪ್ತಾರಾಗಿದ್ದರು . ಸೌಂದರ್ಯ ಸಾವಿನ ಕುರಿತು ಜಗಪತಿ ಬಾಬು ಮಾತನಾಡಿರುವ ವಿಡಿಯೋ ಕ್ಲಿಪ್ ವೈರಲ್ ಆಗುತ್ತಿದೆ. ಈ ಸಂದರ್ಶನದಲ್ಲಿ ನಿರೂಪಕ, ನಿಮ್ಮ ಆತ್ಮೀಯ ಸ್ನೇಹಿತೆ ಸೌಂದರ್ಯ ಮೃತರಾದಾಗ ನಿಮ್ಮ ಮನಸ್ಥಿತಿ ಹೇಗಿತ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಇದಕ್ಕೆ ಉತ್ತರಿಸಿದ ನಟ, ನಾನು ಫಿಲಾಸಪಿಯಲ್ಲಿ ನಂಬಿಕೆಯುಳ್ಳ ವ್ಯಕ್ತಿ. ಹಾಗಾಗಿ ಸೌಂದರ್ಯ ಸಾವಿನಿಂದ ನನಗೆ ತೀವ್ರ ನೋವು ಆಗಲಿಲ್ಲ. ಹುಟ್ಟಿದ ಜೀವಿ ಸಾಯಲೇಬೇಕು ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ಸೌಂದರ್ಯ ಸಾವಿನ ನಂತರದ ವಿಷಯಗಳ ಬಗ್ಗೆ ಯೋಚಿಸಿದಾಗ ನಾನು ತೀವ್ರ ನೋವು ಅನುಭವಿಸಿದೆ ಎಂದು ಜಗಪತಿ ಬಾಬು ಸಂದರ್ಶನದಲ್ಲಿ ಹೇಳಿದ್ದಾರೆ.
ಇದೇ ಹೆಲಿಕಾಪ್ಟರ್ ದುರಂತದಲ್ಲಿ ಸೌಂದರ್ಯ ಸೋದರ ಅಮರನಾಥ್ ಸಹ ಸಾವನ್ನಪ್ಪಿದ್ದರು. ಸತ್ತಾಗ ಅಳಬೇಕು ಎಂಬ ಯಾವುದೇ ನಿಯಮಗಳಿಲ್ಲ. ಹಣ, ಮನೆ ಅಥವಾ ಯಾವುದೇ ವಸ್ತುಗಳನ್ನು ಕಳೆದುಕೊಂಡರೆ ಜೀವನದಲ್ಲಿ ಮತ್ತೊಮ್ಮೆ ಪಡೆದುಕೊಳ್ಳಬಹುದು. ಆದ್ರೆ ಜೀವಗಳನ್ನು ಹಿಂದಿರುಗಿಸಿಕೊಳ್ಳಲು ಎಂದಿಗೂ ಸಾಧ್ಯವಿಲ್ಲ. ಆ ಆತ್ಮೀಯ ವ್ಯಕ್ತಿಗಳನ್ನು ಕಳೆದುಕೊಂಡ ಭಾವ ನನ್ನಲ್ಲಿ ದುಃಖವನ್ನುಂಟು ಮಾಡಿತ್ತು ಎಂದು ಜಗಪತಿ ಬಾಬು ಭಾವುಕರಾಗಿದ್ದರು.
ಇಬ್ಬರು ಮಕ್ಕಳನ್ನು ಒಂದೇ ದಿನ ಕಳೆದುಕೊಂಡ ಆ ತಾಯಿಯ ಸ್ಥಿತಿ ಹೇಗಿರಬೇಕು? ಇಬ್ಬರ ಮಕ್ಕಳ ಮುಂದಿನ ಜೀವನ ಹೇಗೆ? ಅಮರ್ ಪತ್ನಿ ಭವಿಷ್ಯ ಏನು ಎಂಬಿತ್ಯಾದಿ ಪ್ರಶ್ನೆಗಳು ನನ್ನಲ್ಲಿ ಹುಟ್ಟಿಕೊಂಡಿದ್ದವು. ಕುಟುಂಬದಲ್ಲಿ ಆಸ್ತಿ ವಿವಾದ ಏನಾಗುತ್ತೆ ಎಂಬುದರ ಬಗ್ಗೆ ನಾನು ಯೋಚಿಸುತ್ತಿದ್ದೆ ಎಂದು ಜಗಪತಿ ಬಾಬು ಸಂದರ್ಶನದಲ್ಲಿ ಹೇಳಿದ್ದಾರೆ.