ಬೆಂಗಳೂರು: ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವಿರುದ್ಧದ ಪೋಕ್ಸೋ ಪ್ರಕರಣವನ್ನು ಮುಚ್ಚಿ ಹಾಕಲು ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಲ್ಮೀಕಿ, ಮುಡಾ ಹಗರಣಗಳ ಆರೋಪಗಳನ್ನು ಮಾಡುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಆರೋಪಿಸಿದ್ದಾರೆ.
ಬಿಜೆಪಿಯು ಮೈಸೂರು ಸೇರಿದಂತೆ ವಿವಿಧೆಡೆ ನಡೆಸುತ್ತಿರುವ ಪ್ರತಿಭಟನೆ, ವಾಗ್ದಾಳಿ ವಿಚಾರವಾಗಿ ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಟಿ ಬಚಾವೋ ಬೇಟಿ ಪಡಾವೋ ಎನ್ನುವವರು ಈ ಬಗ್ಗೆ ಏಕೆ ಮೌನ ಎಂದು ಪ್ರಶ್ನಿಸಿದರು. ವಾಲ್ಮೀಕಿ ನಿಗಮ ಹಗರಣಕ್ಕೆ ಸಂಬಂಧಿಸಿ ಮಾಜಿ ಸಚಿವ ಬಿ ನಾಗೇಂದ್ರ ಅವರ ಬಗ್ಗೆ ಕೇಳಿ ಬಂದಿರುವ ಆರೋಪಗಳ ಬಗ್ಗೆ ಪ್ರಶ್ನೆಗೆ,
ವಾಲ್ಮೀಕಿ ಹಗರಣದಲ್ಲಿ ನನ್ನ ಕೈವಾಡ ಇಲ್ಲ ಎಂದು ಮಾಜಿ ಸಚಿವ ಬಿ ನಾಗೇಂದ್ರ ಅವರು ಬಹಳ ಸ್ಪಷ್ಟವಾಗಿ ಹೇಳಿದ್ದಾರೆ. ಅಲ್ಲದೆ, ಇದನ್ನು ತನಿಖೆ ನಡೆಸಬೇಕು ಎಂದು ಪತ್ರವನ್ನೂ ಬರೆದಿದ್ದರು. ಐಟಿ ಇಡಿ ಕೇಂದ್ರ ಸರ್ಕಾರದ ಕೈಗೊಂಬೆಯಾಗಿದೆ. ಜಾರ್ಖಂಡ್ ಸಿಎಂ ಅವರನ್ನು ಬಂಧಿಸಿದ್ದರು, ಆದರೆ ಸುಪ್ರೀಂ ಕೋರ್ಟ್ ಯಾವ ಸಾಕ್ಷಿ ಆಧಾರದ ಮೇಲೆ ಬಂಧನ ಮಾಡಿದ್ದೀರಿ ಎಂದು ಪ್ರಶ್ನಿಸಿ ಜಾಮೀನು ನೀಡಿದೆ ಎಂದರು.
ನಾವು ಯಾವುದೇ ರೀತಿಯಲ್ಲಿ ಇದರಲ್ಲಿ ಹಸ್ತಕ್ಷೇಪ ಮಾಡಲ್ಲ. ನಿಗಮದಲ್ಲಿ ಹಸ್ತಕ್ಷೇಪ ಆಗಿದೆ ಎಂದು ಸ್ವತಃ ಬಿ ನಾಗೇಂದ್ರ ಅವರೇ ಹೇಳಿದ್ದಾರೆ. ಆದರೆ ಅಧಿಕಾರಿಗಳ ಕೈವಾಡ ಇದೆ ಇದರಲ್ಲಿ ಎಂದು ಹೇಳಿದ್ದಾರೆ. ಅಧಿಕಾರಿಗಳ ಆಡಿಯೋದಲ್ಲೂ ಇದು ಬಹಳ ಸ್ಪಷ್ಟವಾಗಿದೆ. ನಾಗೇಂದ್ರ ಮತ್ತು ದದ್ದಲ್ ಅವರಿಗೆ ಗೊತ್ತಾದರೆ ರಾದ್ಧಾಂತ ಮಾಡುತ್ತಾರೆ ಎಂದು ಇದೆ ಎಂದು ವಿವರಿಸಿದರು.