ಬೆಂಗಳೂರು:- ಕೇವಲ ಡೆತ್ ನೋಟ್ ಪರಿಗಣಿಸಿ ಆರೋಪಿಗೆ ಶಿಕ್ಷೆ ನೀಡಲ್ಲ, ಅದಕ್ಕೆ ತನಿಖೆಯ ಅಗತ್ಯವಿದೆ ಎಂದು ಹೈಕೋರ್ಟ್ ಹೇಳಿದೆ
ಆತ್ಮಹತ್ಯೆ ನೋಟ್ನಲ್ಲಿ ವ್ಯಕ್ತಿಯ ಹೆಸರು ಇದ್ದ ಮಾತ್ರಕ್ಕೆ ಆತ ಆರೋಪಿಯೆಂಬ ತೀರ್ಮಾನ ಸಲ್ಲ. ಆತ ನಿಜಕ್ಕೂ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾನೆಯೇ ಇಲ್ಲವೇ ಎಂಬುದನ್ನು ತಿಳಿಯಲು ಸಂಪೂರ್ಣ ತನಿಖೆ ಅತ್ಯಗತ್ಯ ಎಂದರು.
ನ್ಯಾ. ವೆಂಕಟೇಶ್ ಟಿ.ನಾಯಕ್ ಅವರಿದ್ದ ಏಕಸದಸ್ಯಪೀಠ, ಈ ಆದೇಶ ನೀಡಿದೆ.
ವಕೀಲರ ವಾದ ಆಲಿಸಿದ ಬಳಿಕ ನ್ಯಾಯಾಲಯ, ಆತ್ಮಹತ್ಯೆ ಪ್ರಕರಣಗಳಲ್ಲಿ ಸಿಗುವ ಸೂಸೈಡ್ ನೋಟ್ಗಳಲ್ಲಿ ಕೆಲವು ಸಲ ವ್ಯಕ್ತಿಯ ಹೆಸರು ಉಲ್ಲೇಖವಾಗಿರುತ್ತದೆ. ಅಂತಹ ಪ್ರಕರಣಗಳಲ್ಲಿ ಮೊದಲಿಗೆ ತನಿಖೆ ನಡೆಸಿ ನೋಟ್ನಲ್ಲಿನ ಅಂಶಗಳ ಸತ್ಯಾಸತ್ಯತೆ ಪರಿಶೀಲಿಸುವ ಬದಲು ತಕ್ಷಣಕ್ಕೆ ಐಪಿಸಿ 306ರಡಿ ಆತ್ಮಹತ್ಯೆಗೆ ಪ್ರಚೋದನೆ ನೀಡಿ, ಅಪರಾಧ ಎಸಗಿದ್ದಾರೆನ್ನುವಂತೆ ಭಾವಿಸಿ ಅವರನ್ನು ಬಂಧಿಸುವುದು ಮಾಮೂಲಿಯಾಗಿದೆ.
ಡೆತ್ ನೋಟ್ನಲ್ಲಿನ ಅಂಶಗಳು ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನು ಪರಿಶೀಲಿಸಿ, ನಿಜವಾಗಿಯೂ ಆತ್ಮಹತ್ಯೆಗೆ ಆ ವ್ಯಕ್ತಿ ಪ್ರಚೋದನೆ ನೀಡಿದ್ದಾನೋ ಇಲ್ಲವೋ ಎಂಬುದನ್ನು ಪರಿಶೀಲಿಸಬೇಕಾಗುತ್ತದೆ. ಆದರೆ ಸತ್ಯಾಂಶ ಅರಿಯಲು ಪೂರ್ಣ ಪ್ರಮಾಣದ ತನಿಖೆ ಮತ್ತು ವಿಚಾರಣೆ, ಎರಡೂ ನಡೆಯಬೇಕಾಗುತ್ತದೆ ಎಂದು ಹೇಳಿದೆ.
ಒಂದು ವೇಳೆ ಐಪಿಸಿ ಸೆಕ್ಷನ್ 306 ಅನ್ವಯಿಸಬೇಕಾದರೆ, ಆತ್ಮಹತ್ಯೆಗೆ ಪ್ರಚೋದನೆಯೇ ಮುಖ್ಯ ಕಾರಣವೆಂದು ದೃಢಪಡಬೇಕು. ಅನ್ಯ ದಾರಿಯಲ್ಲದೆ ಮೃತರು ಆತ್ಮಹತ್ಯೆ ಹಾದಿ ಹಿಡಿದರೆಂದು ಸಾಬೀತುಪಡಿಸಬೇಕಾಗುತ್ತದೆ ಎಂದೂ ಪೀಠ ತನ್ನ ಆದೇಶದಲ್ಲಿ ವಿವರಿಸಿದೆ.