ಜಿಂಬಾಬ್ವೆ ಟಿ20 ಸರಣಿಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಭಾರತ ತಂಡದ ಯುವ ಆರಂಭಿಕ ಅಭಿಷೇಕ್ ಶರ್ಮಾ ಹಲವು ಆಸಕ್ತದಾಯಕ ಸಂಗತಿಗಳನ್ನು ಬಹಿರಂಗಪಡಿಸಿದ್ದಾರೆ.
ತಾವು ಕ್ರಿಕೆಟ್ ಆಡಲು ಪ್ರಮುಖ ಕಾರಣ ಯಾರೆಂದು ಅವರು ಬಹಿರಂಗಪಡಿಸಿದ್ದಾರೆ. ದಿಗ್ಗಜರಾದ ಸಚಿನ್ ತೆಂಡೂಲ್ಕರ್, ವಿರಾಟ್ಕೊಹ್ಲಿ ಹಾಗೂ ಎಂಎಸ್ ಧೋನಿ ಅವರನ್ನು ಕಡೆಗಣಿಸಿದ ಅವರು, 2007 ಟಿ20 ವಿಶ್ವಕಪ್ ಮತ್ತು 2011ರ ವಿಶ್ವಕಪ್ ವಿಜೇತ ಸ್ಟಾರ್ ಆಲ್ರೌಂಡರ್ ಅನ್ನು ಆರಿಸಿದ್ದಾರೆ.
ಈ ಇಬ್ಬರೂ ಸ್ಟಾರ್ ಆಟಗಾರರನ್ನು ಖರೀದಿಸಲು ಕೋಲ್ಕತಾ ನೈಟ್ ರೈಡರ್ಸ್ ಪ್ಲಾನ್ ?!
ಮಂಜೋತ್ ಕರ್ಲಾ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಭಿಷೇಕ್ ಶರ್ಮಾ, 2007ರ ಟಿ20 ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಈ ಟೂರ್ನಿಗಳಲ್ಲಿ ಟೂರ್ನಿ ಶ್ರೇಷ್ಠ ಪ್ರಶಸ್ತಿಗಳನ್ನು ಗೆದ್ದಿದ್ದ ಯುವರಾಜ್ ಸಿಂಗ್ ಅವರನ್ನು ಆಯ್ಕೆ ಮಾಡಿದ್ದಾರೆ. ಯುವರಾಜ್ ಸಿಂಗ್ ಅವರಿಂದಲೇ ನಾನು ಕ್ರಿಕೆಟ್ ವೃತ್ತಿ ಜೀವನವನ್ನು ಆರಿಸಿಕೊಂಡಿದ್ದೇನೆಂದು ಅಭಿಷೇಕ್ ಶರ್ಮಾ ಹೇಳಿಕೊಂಡಿದ್ದಾರೆ.
“ರಣಜಿ ಟ್ರೋಫಿ ಕ್ರಿಕೆಟ್ಗೆ ಪದಾರ್ಪಣೆ ಮಾಡುವ ವೇಳೆ ನಾನು ಮೊದಲ ಬಾರಿ ಯುವರಾಜ್ ಸಿಂಗ್ ಅವರನ್ನು ಭೇಟಿಯಾಗಿದ್ದೆ. ಆಗ ನನಗೆ 16 ವರ್ಷ ವಯಸ್ಸು. ಇದು ಯುವರಾಜ್ ಸಿಂಗ್ಗೆ ಕಮ್ಬ್ಯಾಕ್ ಸೀಸನ್ ಆಗಿತ್ತು ಹಾಗೂ ಅದರಂತೆ ಅವರು 800-900 ರನ್ಗಳನ್ನು ಸಿಡಿಸಿದ್ದರು. ಅವರು ನನಗೆ ಯಾವಾಗಲೂ ಮಾದರಿಯಾಗಿದ್ದಾರೆ. 2007ರಲ್ಲಿ ಭಾರತ ತಂಡ ಟಿ20 ವಿಶ್ವಕಪ್ ಗೆದ್ದಾಗ ನಾನು ಯುವರಾಜ್ ಸಿಂಗ್ ಅವರನ್ನು ನೋಡಿ ಕ್ರಿಕೆಟ್ ಅನ್ನು ಆರಿಸಿಕೊಂಡಿದ್ದೆ. ಅವರ ರೀತಿಯೇ ಬ್ಯಾಟಿಂಗ್, ಬೌಲಿಂಗ್ ಹಾಗೂ ಫೀಲ್ಡಿಂಗ್ ಮಾಡಬೇಕೆಂದು ನಾನು ಅಂದೇ ನಿರ್ಧರಿಸಿದ್ದೆ. ಅವರು ನನ್ನ ಮೇಲೆ ಸಾಕಷ್ಟು ಪ್ರಭಾವವನ್ನು ಬೀರಿದ್ದಾರೆ. ಅವರನ್ನು ಡ್ರೆಸ್ಸಿಂಗ್ ರೂಂನಲ್ಲಿ ನೋಡುತ್ತಾ ಸಾಕಷ್ಟು ಕಲಿತಿದ್ದೇನೆ,” ಎಂದು ಅಭಿಷೇಕ್ ಶರ್ಮಾ ತಿಳಿಸಿದ್ದಾರೆ.