ನವದೆಹಲಿ:- ಆಮ್ ಆದ್ಮಿ ಪಕ್ಷ (AAP) ಮುಂದಿನ ವರ್ಷ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಏಕಾಂಗಿಯಾಗಿ ಹೋರಾಡಲಿದೆ. ಕಾಂಗ್ರೆಸ್ ಜೊತೆಗಿನ ಮೈತ್ರಿ ಕೇವಲ ಸಂಸತ್ ಚುನಾವಣೆಗೆ ಮಾತ್ರವೇ ಹೊರತು ವಿಧಾನಸಭಾ ಚುನಾವಣೆಗೆ ಅಲ್ಲ ಎಂದು ಆಮ್ ಆದ್ಮಿ ಪಕ್ಷ ಹೇಳಿದೆ.
ಈ ಕುರಿತು ಮಾತನಾಡಿರುವ ದೆಹಲಿ ಸಚಿವ ಗೋಪಾಲ್ ರೈ, I.N.D.I.A ಬ್ಲಾಕ್ ಅಸ್ತಿತ್ವಕ್ಕೆ ಬಂದ ಮೊದಲ ದಿನದಿಂದಲೇ ಇದು ಸ್ಪಷ್ಟವಾಗಿದೆ.
“ಲೋಕಸಭಾ ಚುನಾವಣೆಗೆ ಇಂಡಿಯ ಬ್ಲಾಕ್ ಜೊತೆ ಆಪ್ ಕೂಡ ಮೈತ್ರಿ ಮಾಡಿಕೊಂಡಿರುವುದು ಮೊದಲ ದಿನವೇ ಸ್ಪಷ್ಟವಾಗಿದೆ. ಆದರೆ, ನಾವು ವಿಧಾನಸಭೆಗೆ ಸಂಬಂಧಿಸಿದಂತೆ ಯಾವುದೇ ಮೈತ್ರಿ ಮಾಡಿಕೊಂಡಿಲ್ಲ. ಆಮ್ ಆದ್ಮಿ ಪಕ್ಷ ತನ್ನ ಸಂಪೂರ್ಣ ಶಕ್ತಿಯೊಂದಿಗೆ ಚುನಾವಣೆ ಎದುರಿಸಲಿದೆ” ಎಂದು ರೈ ಹೇಳಿದ್ದಾರೆ.
ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ (ಎಎಪಿ) 3 ಸ್ಥಾನಗಳನ್ನು ಗೆದ್ದರೆ, ಕಾಂಗ್ರೆಸ್ 99 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. I.N.D.I.A ಬ್ಲಾಕ್ 232 ಸ್ಥಾನಗಳನ್ನು ಗಳಿಸಿದರೆ NDA 293 ಸ್ಥಾನಗಳನ್ನು ಗೆದ್ದುಕೊಂಡಿದೆ. ನಿತೀಶ್ ಕುಮಾರ್ ಅವರ ಜೆಡಿಯು ಮತ್ತು ಚಂದ್ರಬಾಬು ನಾಯ್ಡು ಅವರ ಟಿಡಿಪಿ ಎನ್ಡಿಎಯಲ್ಲಿ ಮಾತ್ರ ಉಳಿಯುವುದಾಗಿ ಪ್ರತಿಪಾದಿಸಿದ ನಂತರ ಇಂಡಿಯ ಬ್ಲಾಕ್ ಪ್ರತಿಪಕ್ಷವಾಗಿ ಉಳಿಯಲು ನಿರ್ಧರಿಸಿದೆ.
ಎಎಪಿ-ಕಾಂಗ್ರೆಸ್ ಮೈತ್ರಿಯ ದೊಡ್ಡ ಅನುಕೂಲವೆಂದರೆ ದೆಹಲಿಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲುವಿನ ಅಂತರ ಕಡಿಮೆಯಾಗಿದೆ ಎಂದು ಅವರು ಹೇಳಿದ್ದಾರೆ.