ನವದೆಹಲಿ:- ಆಮ್ ಆದ್ಮಿ ಪಕ್ಷವು ಗೋವಾ, ಗುಜರಾತ್, ಅಸ್ಸಾಂನಲ್ಲಿ ಲೋಕಸಭಾ ಅಭ್ಯರ್ಥಿಗಳ ಘೋಷಿಸಿ ಕಾಂಗ್ರೆಸ್ಗೆ ಸಂದೇಶ ರವಾನಿಸಿದೆ.
ಗುಜರಾತ್ನಲ್ಲಿ ಎರಡು ಸ್ಥಾನಗಳಿಗೆ ಮತ್ತು ಮುಂಬರುವ ಲೋಕಸಭೆ ಚುನಾವಣೆಗೆ ಗೋವಾದಲ್ಲಿ ಒಂದು ಸ್ಥಾನಕ್ಕೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ. ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಅಧ್ಯಕ್ಷತೆಯಲ್ಲಿ ನಡೆದ ಎಎಪಿಯ ರಾಜಕೀಯ ವ್ಯವಹಾರಗಳ ಸಮಿತಿಯ ಸಭೆಯಲ್ಲಿ ಗೋವಾ ಮತ್ತು ಗುಜರಾತ್ನಲ್ಲಿ ತನ್ನ ಅಭ್ಯರ್ಥಿಗಳನ್ನು ಘೋಷಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ದೆಹಲಿಯಲ್ಲಿ 7 ಲೋಕಸಭಾ ಸ್ಥಾನಗಳ ಪೈಕಿ ಕೇವಲ 1 ಸ್ಥಾನವನ್ನು ಕಾಂಗ್ರೆಸ್ಗೆ ಬಿಟ್ಟುಕೊಡುವುದಾಗಿ ಈಗಾಗಲೇ ತಿಳಿಸಿದೆ. ಈ ಒಂದು ಸ್ಥಾನಕ್ಕೂ ಕಾಂಗ್ರೆಸ್ ಅರ್ಹವಿಲ್ಲ ಆದರೆ ಮೈತ್ರಿ ಧರ್ಮ ಬಿಡಬಾರದೆಂದು ಒಂದು ಸ್ಥಾನ ನೀಡುತ್ತಿದ್ದೇವೆ ಎಂದು ಎಎಪಿ ಹೇಳಿದೆ.
ಕಳೆದ ವಾರ, ಅರವಿಂದ್ ಕೇಜ್ರಿವಾಲ್ ನೇತೃತ್ವದ ಪಕ್ಷವು ಅಸ್ಸಾಂನ ಗುವಾಹಟಿ, ಸೋನಿತ್ಪುರ ಮತ್ತು ದಿಬ್ರುಗಢ ಲೋಕಸಭಾ ಕ್ಷೇತ್ರಗಳಿಂದ ತನ್ನ ಅಭ್ಯರ್ಥಿಗಳನ್ನು ಏಕಪಕ್ಷೀಯವಾಗಿ ಘೋಷಿಸಿತು. ಏಪ್ರಿಲ್-ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯನ್ನು ಸೋಲಿಸಲು ಅಭ್ಯರ್ಥಿಗಳ ಅರ್ಹತೆ ಮತ್ತು ಗೆಲುವಿನ ಆಧಾರದ ಮೇಲೆ ಗೋವಾ, ಗುಜರಾತ್ ಮತ್ತು ಅಸ್ಸಾಂನಲ್ಲಿ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಎಎಪಿ ನಾಯಕ ಸಂದೀಪ್ ಪಾಠಕ್ ಹೇಳಿದ್ದಾರೆ.
ಎಎಪಿ ತನ್ನ ಅಭ್ಯರ್ಥಿಗಳನ್ನು ಘೋಷಿಸುವುದರ ಹಿಂದಿನ ಕಾರಣವನ್ನು ವಿವರಿಸಿದ ಪಾಠಕ್, ಕಳೆದ ತಿಂಗಳು ಸೀಟು ಹಂಚಿಕೆ ಕುರಿತು ಕಾಂಗ್ರೆಸ್ನೊಂದಿಗೆ ಚರ್ಚೆ ನಡೆಸುವ ಪ್ರಯತ್ನ ಪದೇ ಪದೇ ವಿಫಲವಾಗಿದೆ ಎಂದು ಹೇಳಿದ್ದಾರೆ. ನಾವು ಜನವರಿ 8 ಮತ್ತು ಜನವರಿ 12 ರಂದು ಕಾಂಗ್ರೆಸ್ನೊಂದಿಗೆ ಸೀಟು ಹಂಚಿಕೆ ಕುರಿತು ಎರಡು ಅಧಿಕೃತ ಸಭೆಗಳನ್ನು ನಡೆಸಿದ್ದೇವೆ. ಎರಡೂ ಸಭೆಗಳು ಸೌಹಾರ್ದಯುತ ವಾತಾವರಣದಲ್ಲಿ ನಡೆದವು. ಆದರೆ ಯಾವುದೇ ಫಲಿತಾಂಶ ಬಂದಿಲ್ಲ ಎಂದರು.
ಆ ನಂತರ ಕಾಂಗ್ರೆಸ್ನೊಂದಿಗೆ ಯಾವುದೇ ಸಭೆ ನಡೆದಿಲ್ಲ ಮತ್ತು ಪಕ್ಷದ ಕೆಲವು ಪ್ರಮುಖ ನಾಯಕರು ಸೀಟು ಹಂಚಿಕೆಯ ಮಾತುಕತೆ ಯಾವಾಗ ನಡೆಯಲಿದೆ ಎಂಬುದರ ಬಗ್ಗೆ ಸುಳಿವಿಲ್ಲ ಎಂದು ಪಾಠಕ್ ಹೇಳಿದರು.
ಚುನಾವಣೆಯಲ್ಲಿ ಸ್ಪರ್ಧಿಸುವುದು, ಚುನಾವಣೆಗಳನ್ನು ಗೆಲ್ಲುವುದು ಮತ್ತು ದೇಶಕ್ಕೆ ಹೊಸ ಆಯ್ಕೆಯನ್ನು ನೀಡುವುದು ಮೈತ್ರಿಯ ಉದ್ದೇಶ ಎಂದು ನೀವು ಅರ್ಥಮಾಡಿಕೊಳ್ಳಬೇಕು ಎಂದರು.