ಶಿವಮೊಗ್ಗ:- ಶಿವಮೊಗ್ಗದ ಶಿವಪ್ಪನಾಯಕ ವೃತ್ತದಲ್ಲಿ ರಾಮಮಂದಿರ ಉದ್ಘಾಟನೆ ಪ್ರಯುಕ್ತವಾಗಿ ಆಯೋಜನೆ ಮಾಡಲಾಗಿದ್ದ ಸಿಹಿ ವಿತರಣೆ ಕಾರ್ಯಕ್ರಮದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ‘ಅಲ್ಲಾಹೋ ಅಕ್ಬರ್’ ಘೋಷಣೆ ಕೂಗಿ, ನೀವು ಮೋದಿ ಪರ ಕೆಲಸ ಮಾಡುತ್ತಿದ್ದೀರಿ ಎಂದು ಪೊಲೀಸರಿಗೆ ಆವಾಜ್ ಹಾಕಿದರು. ಪರಿಣಾಮವಾಗಿ ಸ್ಥಳದಲ್ಲಿ ತುಸು ಉದ್ವಿಗ್ನ ಪರಿಸ್ಥಿತಿ ಉಂಟಾಯಿತು.
ಮುಸ್ಲಿಂ ಮಹಿಳೆಯ ಘೋಷಣೆಗೆ ಸ್ಥಳದಲ್ಲಿದ್ದ ಹಿಂದು ಕಾರ್ಯಕರ್ತರು ತೀವ್ರ ಪ್ರತಿರೋಧ ವ್ಯಕ್ತಪಡಿಸಿದರು. ಪ್ರತಿಯೊಬ್ಬರಿಂದಲೂ ಜೈಶ್ರೀರಾಮ್ ಘೋಷಣೆ ಮೊಳಗಿತು. ಈ ಮಧ್ಯೆ, ಮುಸ್ಲಿಂ ಮಹಿಳೆಯನ್ನು ಬಂಧಿಸುವಂತೆ ಬಿಜೆಪಿ ಮುಖಂಡ, ಮಾಜಿ ಸಚಿವ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ ಪೊಲೀಸರನ್ನು ಆಗ್ರಹಿಸಿದರು. ಮುಸ್ಲಿಂ ಮಹಿಳೆ ಗೊಂದಲ ಸೃಷ್ಟಿಸುತ್ತಿದ್ದರೂ ಸುಮ್ಮನಿದ್ದೀರಾ ಎಂದು ಪೊಲೀಸರನ್ನು ಕಾಂತೇಶ್ ತರಾಟೆಗೆ ತೆಗೆದುಕೊಂಡರು. ನಂತರ ಪೊಲೀಸರು ಮುಸ್ಲಿಂ ಮಹಿಳೆಯನ್ನು ವಶಕ್ಕೆ ಪಡೆದು ಜೀಪಿನಲ್ಲಿ ಕರೆದೊಯ್ದರು.
ಅಯೋಧ್ಯೆಯ ರಾಮ ಮಂದಿರದಲ್ಲಿ ಬಾಲ ರಾಮನ ಪ್ರಾಣ ಪ್ರತಿಷ್ಠಾಪನೆ ಪ್ರಯುಕ್ತ ರಾಜ್ಯದಾದ್ಯಂತ ಬಿಜೆಪಿ ನಾಯಕರು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಅಂತೆಯೇ ಹಿಂದೂ ಸಂಘಟನೆಗಳು ಸಹ ಸಿಹಿ ವಿತರಣೆ, ಪೂಜೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿವೆ. ಅದರಂತೆ ಶಿವಮೊಗ್ಗದಲ್ಲಿಯೂ ಸಿಹಿ ವಿತರಣೆ ಕಾರ್ಯಕ್ರಮ ನಡೆಯುತ್ತಿದ್ದಾಗ ಮುಸ್ಲಿಂ ಮಹಿಳೆಯ ಘೋಷಣೆಯಿಂದ ಕೆಲ ಕಾಲ ತುಸು ಉದ್ವಿಗ್ನ ವಾತಾವರಣ ಉಂಟಾಯಿತು.