ಚಿಕ್ಕಮಗಳೂರು:- 30 ಕಾಡಾನೆಗಳಿರುವ ಬೀಟಮ್ಮ ಗ್ಯಾಂಗ್ ನಗರದ ಕೂಗಳತೆ ದೂರದಲ್ಲಿರುವ ಪ್ರತಿಷ್ಠಿತ ಆ್ಯಂಬರ್ ವ್ಯಾಲಿ ಖಾಸಗಿ ವಸತಿ ಶಾಲೆಯಲ್ಲಿ ಬೀಡುಬಿಟ್ಟಿದೆ,
500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಸೇರಿದಂತೆ ಸಿಬ್ಬಂದಿಗಳು ಆತಂಕಗೊಂಡಿದ್ದು, ವಸತಿ ಶಾಲೆಯ ಹೊರಗೆ ಪೋಷಕರು ಕಂಗಾಲಾಗಿ ಹೋಗಿದ್ದಾರೆ. ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಬೀಟಮ್ಮ ಗ್ಯಾಂಗ್ ನೋಡಿ ಶಾಕ್ ಆಗಿದ್ದಾರೆ. ಇದರಿಂದ ಮುಂಜಾಗ್ರತಾ ಕ್ರಮವಾಗಿ 144 ಸೆಕ್ಷನ್ ಜಾರಿ ಮಾಡಿದ್ದಾರೆ.
ಇದೀಗ ಕುಮ್ಕಿ ಆನೆಗಳನ್ನು ಬಳಸಿ ಅರಣ್ಯ ಇಲಾಖೆ ಕಾರ್ಯಚರಣೆ ನಡೆಸಲಿರುವ ಹಿನ್ನಲೆ ನಾಳೆ ವರೆಗೂ ಆ್ಯಂಬರ್ ವ್ಯಾಲಿ ಶಾಲೆ ಸುತ್ತಮುತ್ತಲಿನ ಮೂಗ್ತಿಹಳ್ಳಿ, ಕದ್ರಿಮಿದ್ರಿ, ರಾಂಪುರ, ನಲ್ಲೂರು ಸೇರಿದಂತೆ 9 ಗ್ರಾಮಗಳಲ್ಲಿ ಚಿಕ್ಕಮಗಳೂರು ಜಿಲ್ಲಾಡಳಿತ ನಿಷೇಧಾಜ್ಞೆ ಜಾರಿ ಮಾಡಿದ್ದಾರೆ. ಬೀಟಮ್ಮ ಗ್ಯಾಂಗ್ ಕಾಡಿಗಟ್ಟುವ ಕಾರ್ಯಾಚರಣೆಯನ್ನು ದುಬಾರೆ, ನಾಗರಹೊಳೆಯಿಂದ ಅರಣ್ಯ ಇಲಾಖೆ ಆರಂಭಿಸಲಿದೆ.
ಆ್ಯಂಬರ್ ವ್ಯಾಲಿ ವಸತಿ ಶಾಲೆಯ ಸುತ್ತಲೂ ಪೊಲೀಸ್ ಹಾಗೂ ಅರಣ್ಯ ಇಲಾಖೆ ಅಧಿಕಾರಿಗಳು ಸರ್ಪಗಾವಲಿದ್ದಾರೆ. 30 ಕಾಡಾನೆಗಳ ತಂಡದಲ್ಲಿ ಐದಾರು ಮರಿಗಳು ಇದ್ದು, ಆನೆ ಓಡಿಸೋದಕ್ಕೆ ಅರಣ್ಯ ಇಲಾಖೆ ಕೂಡ ಹಿಂದೇಟು ಹಾಕುತ್ತಿದೆ. ಮರಿಗಳಿರೋದ್ರಿಂದ ಆನೆಗಳು ಗಾಬರಿಯಾಗಿ ಚಿಕ್ಕಮಗಳೂರು ನಗರಕ್ಕೆ ಎಂಟ್ರಿಯಾದರೆ ದೊಡ್ಡ ಅನಾಹುತವಾಗುತ್ತೆಂದು ಅಧಿಕಾರಿಗಳು ಕೂಡ ಸಂಜೆಯಾಗೋದನ್ನೆ ಕಾಯುತ್ತಿದ್ದಾರೆ. ಸಂಜೆ ಬಳಿಕ ಆನೆ ಹೋಗುವ ದಾರಿ ಬಿಟ್ಟು ಉಳಿದ ಕಡೆ ಬಂದ್ ಮಾಡಿ ಪಟಾಕಿ ಸಿಡಿಸೋದಕ್ಕೆ ಅಧಿಕಾರಿಗಳು ಸಿದ್ಧರಾಗಿದ್ದಾರೆ.