ಬೆಂಗಳೂರು: ಆ ಪುಟ್ಟ ಕಂದಮ್ಮ ತನ್ನ ಪಾಡಿದೆ ತಾನು ಆಟವಾಡ್ತಾಯಿತ್ತು.. ಆದ್ರೆ ಪಾಪ ಆ ಮಗುವಿಗೆ ಗೊತ್ತಿರಲಿಲ್ಲ, ಕಾರಿನ ರೂಪದಲ್ಲಿ ತನ್ನ ಸಾವು ಬರತ್ತೆ ಅಂತ.. ಒಂದೇ ಸಮನೆ ಮಗುವಿನ ಮೇಲೆ ಕಾರು ಹತ್ತಿದ್ದು, ಆ ಮಗು ಕೊನೆಯುಸಿರೆಳೆದಿದೆ..
ಈ ದೃಶ್ಯ ನೋಡೋದಕ್ಕೆ ತುಂಬಾನೆ ಭಯಾನಕವಾಗಿದೆ.. ಹೌದು.. ಆಟವಾಡುತ್ತಿದ್ದ ಬಾಲಕಿ ಮೇಲೆ ಕಾರು ಹರಿದು ಸಾವನ್ನಪ್ಪಿರುವ ದಾರುಣ ಘಟನೆ ಡಿಸೆಂಬರ್ 9ರ ಬೆಳಗ್ಗೆ ಏಳು ಘಂಟೆಗೆ ಬೆಳ್ಳಂದೂರು ಠಾಣಾ ವ್ಯಾಪ್ತಿಯ ಕಸವನಹಳ್ಳಿಯ ಸಮೃದ್ಧಿ ಅಪಾರ್ಟ್ಮೆಂಟ್ ಬಳಿ ನಡೆದಿದೆ. . ನೇಪಾಳ ಮೂಲದ ಜೋಗ್ ಜುತಾರ್ ಹಾಗೂ ಅನಿತಾ ದಂಪತಿಯ 3 ವರ್ಷದ ಮಗು ಅರ್ಬಿನಾ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಸಾವನ್ನಪ್ಪಿದ್ದು, ಬೆಳ್ಳಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..
ಸಮೃದ್ದಿ ಅಪಾರ್ಟ್ಮೆಂಟ್ ನಲ್ಲಿ ಮುಂಭಾಗದಲ್ಲಿ ಆಟವಾಡುತ್ತಿದ್ದ ಮಗುವನ್ನ ಗಮನಿಸದ ಅದೇ ಅಪಾರ್ಟ್ಮೆಂಟ್ ನಿವಾಸಿ ಸುಮನ್ ಎಂಬ ಈತ ಕಾರು ಹರಿಸಿಕೊಂಡು ಹೋಗಿದ್ದಾನೆ. ಘಟನೆಯ ಬಗ್ಗೆ ಅರಿವೇ ಇರದ ಪೋಷಕರು, ಅಪಾರ್ಟ್ಮೆಂಟ್ ಗೇಟಿಗೆ ಸಿಲುಕಿಹಾಕಿಕೊಂಡು ಮಗು ಬಿದ್ದಿರಬಹುದೆಂದು ಭಾವಿಸಿ ಸಮೀಪದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ.ಆದರೆ ಭುಜದ ಮೂಳೆ ಮುರಿದು ಗಂಭೀರವಾಗಿ ಗಾಯಗೊಂಡಿದ್ದ ಮಗುವಿಗೆ ತಕ್ಷಣ ಹೆಚ್ಚಿನ ಚಿಕಿತ್ಸೆ ಅಗತ್ಯವಿದೆ ಎಂದು ವೈದ್ಯರು ತಿಳಿಸಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಹೆಚ್ಚು ಹಣ ಕೇಳಿದ್ದರಿಂದ ಚಿಕಿತ್ಸೆ ಕೊಡಿಸಲು ಸಾದ್ಯವಾಗಿಲ್ಲಾ. ತಕ್ಷಣ ಪೋಷಕರು ಮಗುವನ್ನ ಸಂಜಯ್ ಗಾಂಧಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪರಿಶೀಲಿಸಿದ ವೈದ್ಯರು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸುವಂತೆ ಸೂಚಿಸಿದ್ದಾರೆ. ಆದರೆ ನಿಮ್ಹಾನ್ಸ್ ಆಸ್ಪತ್ರೆಗೆ ಕರೆದೊಯ್ಯುವಷ್ಟರಲ್ಲಿ ಮಗು ಉಸಿರು ಚೆಲ್ಲಿ ಬಿಟ್ಟಿತ್ತು.. ಮಗುವಿನ ಸಾವಿನ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದ ಪೋಷಕರು, ‘ಕಾರಣ ಪತ್ತೆಹಚ್ಚುವಂತೆ ಡಿಸೆಂಬರ್ 10ರಂದು ಬೆಳ್ಳಂದೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು..
ಪ್ರಕರಣ ದಾಖಲಿಸಿಕೊಂಡ ಪೊಲೀಸರು ಅಪಾರ್ಟ್ಮೆಂಟ್ ಸಮೀಪದ ಸಿಸಿಟಿವಿ ದೃಶ್ಯಗಳನ್ನ ಪರಿಶೀಲಿಸಿದಾಗ, ಮಗುವಿನ ಮೇಲೆ ಕಾರು ಹರಿದಿರುವುದು ಪತ್ತೆಯಾಗಿದೆ. ಸಿಆರ್ ಪಿಸಿ 174C ಸೆಲ್ಷನ್ ಅಡಿಯಲ್ಲಿ ಕೇಸ್ ದಾಖಲು ಮಾಡಿಕೊಂಡಿದ್ದ ಪೊಲೀಸರು ಈಗ ಅಪಘಾತ ಪ್ರಕರಣ ಎಂದು ನ್ಯಾಯಾಲಯದ ಆದೇಶವನ್ನು ಪಡೆದು ದಾಖಲು ಮಾಡಿ ಮುಂದಿನ ತನಿಖೆಗಾಗಿ ಬೆಳ್ಳಂದೂರು ಸಂಚಾರ ಪೊಲೀಸ್ ಠಾಣೆಗೆ ಪ್ರಕರಣದ ತನಿಖೆಗಾಗಿ ವರ್ಗಾವಣೆ ನೀಡಿದ್ದಾರೆ. ಅಪಘಾತ ಬಳಿಕ ಕಾರು ಚಾಲಕ ಸುಮನ್ ನಾಪತ್ತೆಯಾಗಿದ್ದು ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ… ಒಟ್ಟಿನಲ್ಲಿ ಇನ್ನು ಜಗತ್ತನ್ನೆ ಕಾಣದ ಹಸುಗೂಸು ಯಾರೋ ಮಾಡಿದ ತಪ್ಪಿಗೆ ಬಲಿಯಾಗಿ ಹೋಗಿದೆ…/