ವಿಜಯಪುರ: ಹೋಳಿ ಆಚರಣೆಯ ಸಂದರ್ಭದಲ್ಲಿ ಹಾಡಹಗಲೇ ಮುದ್ದೇಬಿಹಾಳ ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಮೊಬೈಲ್ ಅಂಗಡಿಯೊಂದರ ಬೀಗ ಮುರಿದ ಕಳ್ಳನೋರ್ವ ನಾಲ್ಕು ಮೊಬೈಲ್ ಹಾಗೂ ಅಂಗಡಿಯಲ್ಲಿದ್ದ ನಗದು ಕಳ್ಳತನ ಮಾಡಿಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ.
ಪಟ್ಟಣದ ದನದ ದವಾಖಾನೆ ಎದುರಿಗೆ ಇರುವ ಆರ್ಯವರ್ಧನ ಮೊಬೈಲ್ ಶಾಪ್ನಲ್ಲಿ ಈ ಕಳ್ಳತನ ನಡೆದಿದೆ. ಮದ್ಯಾಹ್ನ 12.15 ರಿಂದ 12.30 ರವರೆಗೆ ಈ ಕಳ್ಳತನ ಮಾಡಿರುವುದು ಅಂಗಡಿಯಲ್ಲಿರುವ ಸಿಸಿ ಕ್ಯಾಮೆರಾದ ದೃಶ್ಯದಲ್ಲಿ ಸೆರೆಯಾಗಿದೆ.
ಅಂಗಡಿ ಮಾಲೀಕ ರಾಜು ನಾಡಗೌಡ, ಹೋಳಿಹಬ್ಬದ ಸಲುವಾಗಿ ಮನೆಯವರೊಂದಿಗೆ ಕೂಡಲಸಂಗಮಕ್ಕೆ ತೆರಳಿದ್ದ ವೇಳೆ ಘಟನೆ ನಡೆದಿದೆ. ನಾಲ್ಕು ಮೊಬೈಲ್ ಹಾಗೂ ನಗದು ಸೇರಿದಂತೆ 75 ಸಾವಿರ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿವೆ. ಹಾಡಹಗಲೇ ಅಂಗಡಿ ಕಳುವು ಆಗಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಘಟನಾ ಸ್ಥಳಕ್ಕೆ ಪೊಲೀಸರುಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಖ್ಯರಸ್ತೆಯಲ್ಲೇ ಹಗಲು ಹೊತ್ತಿನಲ್ಲಿ ಅಂಗಡಿ ಕಳ್ಳತನ ಆಗಿರುವುದು ಸಾರ್ವಜನಿಕರು, ವ್ಯಾಪಾರಸ್ಥರಲ್ಲಿ ಅಚ್ಚರಿಗೆ ಕಾರಣವಾಗಿದೆ.