ಗದಗ:- ಜಿಲ್ಲೆಯ ಮುಂಡರಗಿ ತಾಲೂಕಿನ ಕೊರ್ಲಹಳ್ಳಿ ಸೇತುವೆ ಬಳಿ ತುಂಗಭ್ರದಾ ನದಿಯಲ್ಲಿ ಈಜಲು ತೆರಳಿದ್ದ ಮೂವರು ಯುವಕರು ನಾಪತ್ತೆಯಾಗಿರುವ ಘಟನೆ ಜರುಗಿದೆ.
ಈ ದುರ್ಘಟನೆ ಮದಲಗಟ್ಟಿ ಆಂಜನೇಯನ ದರ್ಶನ ಪಡೆದು ತುಂಗಭದ್ರಾ ನದಿಗೆ ಈಜಲು ಇಳಿದಾಗ ಸಂಭವಿಸಿದೆ. 34 ವರ್ಷದ ಶರಣಪ್ಪ ಬಡಿಗೇರ್, 36 ವರ್ಷದ ಮಹೇಶ್ ಬಡಿಗೇರ್, 38 ವರ್ಷದ ಗುರುನಾಥ್ ಬಡಿಗೇರ್ ನಾಪತ್ತೆಯಾದವರು. ಗದಗ ಜಿಲ್ಲೆ ಶಿರಹಟ್ಟಿಯಿಂದ ಐವರು ಸ್ನೇಹಿತರ ತಂಡ ಬಂದಿದ್ದರು. ಇವರಲ್ಲಿ ದೇವರ ದರ್ಶನ ಪಡೆದು ನದಿಯಲ್ಲಿ ಈಜಲು ಮೂವರು ತೆರಳಿದ್ದರು. ಬರ್ತ್ ಡೇ ಹಿನ್ನೆಲೆ ಸೇಹಿತರೊಂದಿಗೆ ಶರಣಪ್ಪ ಬಡಿಗೇರ್ ದೇವಸ್ಥಾನಕ್ಕೆ ಬಂದಿದ್ದರು ಎನ್ನಲಾಗಿದೆ. ಈಜಲು ಬಾರದಿದ್ದರೂ ಮೊದಲಿಗೆ ಮಹೇಶ್ ಬಡಿಗೇರ್ ನದಿಗೆ ಇಳಿದಿದ್ದರು. ಈ ವೇಳೆ ಈಜಲು ಬಾರದೆ ಇದ್ದಾಗ ನದಿಯಲ್ಲಿ ಮಹೇಶ್ ಕೊಚ್ಚಿ ಹೋಗಿದ್ದಾನೆ. ಕೂಡಲೇ ಮಹೇಶ್ ನನ್ನ ರಕ್ಷಿಸಲು ಶರಣಪ್ಪ, ಗುರುನಾಥ್ ಎಂಬುವವರು ನದಿಗೆ ಇಳಿದಿದ್ದಾರೆ. ಈ ವೇಳೆ ಮೂವರು ನದಿಯಲ್ಲಿ ಕೊಚ್ಚಿಹೋಗಿ ನಾಪತ್ತೆ ಆಗಿದ್ದಾರೆ.
ನದಿಯಲ್ಲಿ ನಾಪತ್ತೆಯಾಗಿರುವ ಮೂವರಿಗಾಗಿ ಹುಡುಕಾಟ ನಡೆಸಲಾಗಿದೆ. ಕೂಡಲೇ ಮಾಹಿತಿ ಆಧರಿಸಿ ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ಸಿಬ್ಬಂದಿ ಮೀನುಗಾರರ ಸಹಾಯದೊಂದಿಗೆ ನದಿಯಲ್ಲಿ ಶೋಧಕಾರ್ಯ ನಡೆಸಿದ್ದಾರೆ.