ಬೆಂಗಳೂರು : ಸಿಎಂ ಸಿದ್ದರಾಮಯ್ಯ ಪ್ರಸಕ್ತ ಸಾಲಿನ ಬಜೆಟ್ ಮಂಡನೆ ಮಾಡಿದ್ದು, ಹಲವು ಕ್ಷೇತ್ರಗಳಿಗೆ ಅನುದಾನ ಘೋಷಿಸಿದ್ದಾರೆ. ಅಲ್ಲದೇ ಈ ಬಾರಿ ಚಿತ್ರರಂಗಕ್ಕೂ ಕೂಡ ಸಿಎಂ ಸಿದ್ದರಾಮಯ್ಯ ಕೆಲ ಸಿಹಿ ಸುದ್ದಿಗಳನ್ನು ನೀಡಿದ್ದಾರೆ. ಈ ಬಾರಿಯ ಬಜೆಟ್ನಲ್ಲಿ ಕನ್ನಡ ಚಿತ್ರರಂಗಕ್ಕೆ ಏನೆಲ್ಲಾ ಸಿಹಿ ಸುದ್ದಿ ಕೊಟ್ಟಿದ್ದಾರೆ ಅನ್ನೋದರ ಮಾಹಿತಿ ಇಲ್ಲಿದೆ.
ಮೈಸೂರಿನಲ್ಲಿ ಫಿಲಂ ಸಿಟಿ
ಕನ್ನಡ ಚಿತ್ರರಂಗದ ದಶಕಗಳ ಬೇಡಿಕೆ ಎಂದರೆ ಫಿಲಂ ಸಿಟಿ ನಿರ್ಮಾಣ. 2025-26ರನೇ ಸಾಲಿನ ಬಜೆಟ್ನಲ್ಲಿ ಸಿಎಂ ಸಿದ್ದರಾಮಯ್ಯ ಫಿಲಂ ಸಿಟಿ ನಿರ್ಮಾಣಕ್ಕೆ ಮೈಸೂರಿನಲ್ಲಿ 150 ಎಕರೆ ಜಾಗವನ್ನು ಕಾಯ್ದಿರಿಸಲಾಗಿದೆ. ಅಲ್ಲದೇ ಫಿಲಂ ಸಿಟಿ ನಿರ್ಮಾಣಕ್ಕೆ 500 ಕೋಟಿ ಹಣ ಘೋಷಣೆ ಮಾಡಿದ್ದಾರೆ.
ಕನ್ನಡ ಸಿನಿಮಾಗಳಿಗೆ OTT ವೇದಿಕೆ
ಕೇರಳದಂತೆಯೇ ಕನ್ನಡ ಸಿನಿಮಾಗಳಲ್ಲಿ ಒಟಿಟಿ ವೇದಿಕೆ ನಿರ್ಮಿಸಲು ಮುಂದಾಗಿದೆ. ಕನ್ನಡ ಸಿನಿಮಾಗಳನ್ನು ಯಾವ ಒಟಿಟಿಗಳೂ ಖರೀದಿಸುತ್ತಿಲ್ಲ ಎಂಬ ದೂರು ಕಳೆದ ಕೆಲ ವರ್ಷಗಳಿಂದ ಕೇಳಿ ಬರುತ್ತಿದೆ. ಹಾಗಾಗಿ ಈಗ ಸರ್ಕಾರವೇ ಮುಂದಾಗಿ ಒಟಿಟಿ ವೇದಿಕೆ ಸೃಷ್ಟಿಸಲು ಮುಂದಾಗಿದ್ದು, ಇಲ್ಲಿ ಕನ್ನಡ ಸಿನಿಮಾಗಳನ್ನು ಪ್ರದರ್ಶನ ಮಾಡಲಿದೆ.
ಸಿನಿಮಾ ಕ್ಷೇತ್ರ ಕೈಗಾರಿಕಾ ನೀತಿ ಅಡಿ ತರಲು ನಿರ್ಧಾರ
ಇನ್ನೂ ಸಿನಿಮಾ ಉದ್ಯಮವನ್ನು ಸಿನಿಮಾ ಕೈಗಾರಿಕೆ ಎಂದು ಘೋಷಿಸಲಾಗಿದೆ. ಸಿನಿಮಾ ರಂಗವನ್ನು ಕೈಗಾರಿಕೆಯನ್ನಾಗಿ ಗುರುತಿಸುವ ಮೂಲಕ ಕೈಗಾರಿಕಾ ನೀತಿಯ ಅಡಿ ಸರ್ಕಾರ ನೀಡುವ ಸವಲತ್ತುಗಳು, ನಿಯಮಗಳು ಸಿನಿಮಾ ರಂಗಕ್ಕೂ ಅನ್ವಯ ಆಗಲಿದೆ.
1.81 ಲಕ್ಷ ರೈತರಿಗೆ ಹನಿ, ತುಂತುರು ನೀರಾವರಿ ಘಟಕಗಳ ಅಳವಡಿಕೆಗೆ 440 ಕೋಟಿ ರೂ.ಸಹಾಯಧನ!
ಮಲ್ಟಿಫ್ಲೆಕ್ಸ್ಗಳಲ್ಲಿ ಏಕರೂಪದ ದರ
ಮಲ್ಟಿಪ್ಲೆಕ್ಸ್ಗಳು ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿರುವುದರ ವಿರುದ್ಧ ಕ್ರಮಕ್ಕೆ ಬಹಳ ದಿನಗಳಿಂದಲೂ ಒತ್ತಾಯ ಕೇಳಿ ಬಂದಿತ್ತು. ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ಗಳು ಬಹಳ ದುಬಾರಿ ಬೆಲೆಗೆ ಟಿಕೆಟ್ ಮಾರಾಟ ಮಾಡುತ್ತಿವೆ.. ಇದೀಗ ಸರ್ಕಾರವು, ಮಲ್ಟಿಪ್ಲೆಕ್ಸ್ಗಳ ಟಿಕೆಟ್ ದರವನ್ನು 200 ರೂಪಾಯಿಗೆ ನಿಗದಿಪಡಿಸಿ ಸರ್ಕಾರ ಆದೇಶ ಹೊರಡಿಸಿದೆ.
ಚಲನಚಿತ್ರ ಅಕಾಡೆಮಿ ಅಭಿವೃದ್ಧಿ
ಬೆಂಗಳೂರಿನ ನಂದಿನಿ ಲೇಔಟ್ನಲ್ಲಿರುವ ಚಲನಚಿತ್ರ ಅಕಾಡೆಮಿಯನ್ನು ಅಭಿವೃದ್ಧಿಪಡಿಸುವುದಾಗಿ ಸರ್ಕಾರ ಘೋಷಣೆ ಮಾಡಿದೆ. ಖಾಸಗಿ ಸಹಭಾಗಿತ್ವದಲ್ಲಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಭಿವೃದ್ಧಿ ಮಾಡಲಾಗುತ್ತದೆಯಂತೆ.