ವಿಜಯನಗರ: ಹಂಪಿ ಕನ್ನಡ ಕಾವ್ಯದ ತೊಟ್ಟಿಲು ಗ್ರಾಮೀಣ ಮಹಿಳೆಯಾಗಿದ್ದು, ಅವರನ್ನು ಗೌರವಿಸುವ ಕೆಲಸ ನಾವು ಮಾಡಬೇಕಿದೆ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಸಾಹಿತಿ ಕುಂ. ವೀರಭದ್ರಪ್ಪ ಹೇಳಿದರು. ಅವರು ಶುಕ್ರವಾರ ಹಂಪಿ ಉತ್ಸವ- 2025 ರ ಅಂಗವಾಗಿ ಶ್ರೀ ವಿರೂಪಾಕ್ಷೇಶ್ವರ ದೇವಾಲಯ ವೇದಿಕೆಯಲ್ಲಿ ಹಮ್ಮಿಕೊಂಡಿದ್ದ ಮಹಿಳಾ ಕವಿಗೋಷ್ಠಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಹಿಳಾ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟನೆ ನೆರವೇರಿಸಿರುವುದಕ್ಕೆ ನನಗೆ ತುಂಭಾ ಸಂತೋಷವಾಗುತ್ತಿದೆ. ಎಲ್ಲಾ ಮೂಢ ನಂಬಿಕೆಗಳನ್ನು ತುಳಿಯುವ ಶಕ್ತಿ ನಮ್ಮ ಕನ್ನಡ ಕಾವ್ಯಕ್ಕಿದೆ. ಕಲ್ಲು ಕೊಟ್ಟವರಿಗೂ ಎಲ್ಲಾ ಭಾಗ್ಯವು ಬರಲಿ ಎಂದು ಹಾರೈಸಿದವರು ಕನ್ನಡದ ಮಹಿಳೆಯರು. ಇದು ನಮ್ಮ ನಾಡಿನ ಹೆಣ್ಣು ಮಕ್ಕಳ ಉದಾತ್ತ ಚಿಂತನೆಗೆ ಉದಾಹರಣೆಯಾಗಿದೆ. ವರ್ತಮಾನದ ಕಾವ್ಯ ಹಾಗೂ ಚಿಂತನೆಗಳಲ್ಲಿ ಕಡು ಬಡುತನದ ಯಾರು ಬರೆಯುತ್ತಿಲ್ಲ. ಕನ್ನಡ ಭಾಷೆಯ ಬಳಕೆ ಕಡಿಮೆಯಾಗಿದೆ. ಭಾಷೆ ಜೀವಂತವಾಗಿ ಇರಬೇಕಾದರೆ ಮಕ್ಕಳಿಗೆ ಹೆಚ್ಚಾಗಿ ಕನ್ನಡ ಭಾಷೆಯಲ್ಲಿ ಮಾತನಾಡುವ ವಾತಾವರಣ ಶಾಲೆಗಳಲ್ಲಿ ಕಲ್ಪಿಸಬೇಕಿದೆ ಎಂದು ಅಭಿಪ್ರಾಯಪಟ್ಟರು. ನನ್ನ ಸಾಹಿತ್ಯ ಚಿಂತನೆ ಹಾಗೂ ಭಾಷೆಯ ಸೃಷ್ಟಿಗೆ ಬಳ್ಳಾರಿ ನೆಲ ಕಾರಣ. ನನ್ನ ಕಥೆ ಕಾದಂಬರಿಗಳಲ್ಲಿ ಮಹಿಳಾ ಧ್ವನಿಗಳನ್ನು ಸಶಕ್ತವಾಗಿ ಅಭಿವ್ಯಕ್ತಿಸಿದ್ದೆನೆ. ಕವಿಗೆ ಸ್ತ್ರೀ ತನ ಇಲ್ಲದಿದ್ದರೆ ಒಳ್ಳೆಯ ಲೇಖಕನಾಗಲು ಸಾಧ್ಯವಿಲ್ಲ ಎಂದು ಕುಂ.ವೀರಭದ್ರಪ್ಪ ಹೇಳಿದರು.
ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ ಮಾತನಾಡಿ ಹಂಪಿ ಉತ್ಸವದಲ್ಲಿ ಹಿಂದಿನ ವರ್ಷದಿಂದ ಕವಿಗೋಷ್ಠಿಯನ್ನು ಪ್ರಾರಂಭಿಸಿದ್ದೆವೆ. ಮಹಿಳಾ ಕವಿಗೋಷ್ಠಿಯಲ್ಲಿ ಅವರ ಚಿಂತನೆಗಳು ಹೊರ ಬರಬೇಕು. ಮಹಿಳೆಯರು ತಮ್ಮ ವಿಚಾರ ವಿನಿಮಯಗಳನ್ನು ಹೊರ ಹಾಕಲು ಇದೊಂದು ಒಳ್ಳೆಯ ವೇದಿಕೆಯಾಗಿದೆ. ತಮ್ಮ ಈ ಕಾರ್ಯಕ್ರಮ ಯಶಸ್ವಿಯಾಗಲಿ ಎಂದು ಹೇಳಿದರು.
ವಿಮರ್ಶಕರಾದ ಡಾ. ಸೋಮಕ್ಕ ಎಂ. ಅವರು ಆಶಯ ನುಡಿಗಳನ್ನಾಡಿ ಶತ- ಶತಮಾನಗಳಿಂದ ಮಹಿಳೆಯರು ಅವಕಾಶ ವಂಚಿತರಾಗಿದ್ದರು. ಬುದ್ದ. ಬಸವ. ಅಂಬೇಡ್ಕರ್ ಚಿಂತನೆಗಳಿಂದ ಮಹಿಳೆಯರ ಪರವಾದ ನೀತಿ ನಿಯಮಗಳು ಇಂದು ಜಾರಿಯಾಗಿವೆ. ಅವರಿಗೆ ತಮ್ಮ ಎಲ್ಲಾ ವಿಚಾರ ವಿನಿಮಯ ಅಭಿವ್ಯಕ್ತಪಡಿಸುವ ಅವಕಾಶ ಸಿಕ್ಕಿದೆ. ಶಿವರಾತ್ರಿ ದಿನ ಜನರು ಸಾಲು – ಸಾಲಾಗಿ ದೇವಾಲಯಗಳ ಮುಂದೆ ಕ್ಯೂ ನಿಂತಿದ್ದರು. ಆದರೆ ದೇವಾಲಯದ ಮುಂದೆ ನಿಲ್ಲುವ ಕ್ಯೂಗಿಂತ ಗ್ರಂಥಾಲಯದ ಮುಂದೆ ನಿಂತರೆ ನಮ್ಮ ಬದುಕು ಅರ್ಥಪೂರ್ಣವಾಗುತ್ತದೆ ಎಂದರು.
ಸಮಾಜದಲ್ಲಿ ಬಹುತೇಕ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ನಮಗೆ ಸ್ವಾತಂತ್ರ್ಯ ಸಿಕ್ಕು 75 ವರ್ಷಗಳಾದರು ಹೆಣ್ಣಿನ ಮೇಲೆ ಇನ್ನೂ ಶೋಷಣೆ ದೌರ್ಜನ್ಯ ನಡಿತಾ ಇದೆ ಇದರ ವಿರುದ್ದ ಮಹಿಳೆಯರು ಧ್ವನಿ ಎತ್ತಬೇಕಿದೆ. ಹೆಣ್ಣು- ಗಂಡು ಚಹರೆ ಮೂಲಕ ಗುರುತಿಸಬಹುದು ಆದರೆ ಮಾನಸಿಕವಾಗಿ ಅಲ್ಲ. ವಿದೇಶದಲ್ಲಿ ಮಹಿಳೆಯರು ತುಂಡು ಬಟ್ಟೆ ತೊಟ್ಟರು ಅವರ ಮೇಲೆ ದೌರ್ಜನ್ಯ ನಡೆಯುವುದಿಲ್ಲ ನಮ್ಮ ದೇಶದಲ್ಲಿ ಮಹಿಳೆ ಮೈ ತುಂಬ ಬಟ್ಟೆ ಉಟ್ಟರು ಅವಳ ಮೇಲೆ ದೌರ್ಜನ್ಯಗಳು ನಡೆಯುತ್ತದೆ ಅವಳನ್ನು ನೋಡುವ ದೃಷ್ಟಿ ನಮ್ಮ ಸಮಾಜದ್ದು ಬದಲಾಗಬೇಕಿದೆ ಎಂದು ಹೇಳಿದರು.
ಅಂಕಣ ಬರಹಗಾರರಾದ ಶ್ರೀ ದೇವಿ ಕೆರೆಮನೆ ಅವರು ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಸಾದ ಅಖಂಡ ಬಳ್ಳಾರಿ ಜಿಲ್ಲಾಧ್ಯಕ್ಷರಾದ ಡಾ. ನಿಷ್ಠಿ ರುದ್ರಪ್ಪ, ಹೊಸಪೇಟೆ ತಾಲ್ಲೂಕು ಕಸಾಪ ಅಧ್ಯಕ್ಷರಾದ ಡಾ. ಗುಂಡಿ ಮಾರುತಿ, ಸಾಹಿತಿ ಡಾ. ದಯಾನಂದ ಕಿನ್ನಾಳ, ಶಾಲಾ- ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಉಪನಿರ್ದೆಶಕರಾದ ವೆಂಕಟೇಶ್ ರಾಮಚಂದ್ರಪ್ಪ, ಪ್ರಾಚಾರ್ಯರಾದ ನಾಗರಾಜ್ ಹವಾಲ್ದಾರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶ್ವೇತಾ, ಸಿಂಧು., ಸುಭದ್ರಾ ಸೇರಿದಂತೆ ಇತರೆ ಹಲವಾರು ಕವಿ-ಕವಿಯಿತ್ರಿಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.