ತುಮಕೂರು : ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದಾರೆ. ತುಮಕೂರು ಜಿಲ್ಲೆ ಕೊರಟಗೆರೆ ಪಟ್ಟಣದ ಡಿಗ್ರಿ ಕಾಲೇಜು ಬಳಿ ಘಟನೆ ನಡೆದಿದೆ. ಕೃತ್ಯ ನಡೆಸಿದ ಕೆಲವೇ ಕೆಲವು ಗಂಟೆಗಳಲ್ಲಿ ಕಿಡಿಗೇಡಿಯನ್ನು ಪೊಲೀಸರು ಬಂಧಿಸಿದ್ದು, ಕೊರಟಗೆರೆ ಮೂಲದ ಕಾರ್ತಿಕ್ (35) ಬಂಧಿತ ವ್ಯಕ್ತಿಯಾಗಿದ್ದಾನೆ.
ಸಂತೋಷ್ ಎಂಬುವರಿಗೆ ಸೇರಿದ ಅಪಾಚಿ ಹಾಗೂ ಹೋಂಡಾ ಆಕ್ಟೀವಾ ಬೈಕ್ಗಳಿಗೆ ಬೆಂಕಿ ಹಾಕಿದ್ದಾನೆ. ಸಂತೋಷ್ ಎಂದಿನಂತೆ ತಮ್ಮ ಅಂಗಡಿ ಬಳಿ ಬೈಕ್ ಗಳನ್ನ ಪಾರ್ಕ್ ಮಾಡಿದ್ದರು. ಕಳೆದ ಗುರುವಾರ ರಾತ್ರಿ 10 ಗಂಟೆ ಸಮಯದಲ್ಲಿ ಮಾರುತಿ ಸ್ವಿಫ್ಟ್ ಕಾರಿನಲ್ಲಿ ಬಂದ ಕಿಡಿಗೇಡಿ ಎರಡು ಬೈಕ್ ಗಳಿಗೆ ಪೆಟ್ರೋಲ್ ಸುರಿದು ಬೆಂಕಿ ಇಟ್ಟು ಪರಾರಿಯಾಗಿದ್ದಾನೆ. ಬೆಂಕಿ ಕೆನ್ನಾಲಿಗೆಗೆ ಎರಡು ಬೈಕ್ ಗಳು ಸಂಪೂರ್ಣ ಸುಟ್ಟ ಕರಕಲಾಗಿವೆ. ಕೂಡಲೇ ಸ್ಥಳಕ್ಕೆ ದೌಡಾಯಿಸಿ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ..
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಕೊರಟಗೆರೆ ಪೊಲೀಸರು ಸಿಸಿಟಿವಿ ದೃಶ್ಯದಲ್ಲಿ ಸೆರೆಯಾಗಿದ್ದ ದೃಶ್ಯ ಆಧರಿಸಿ ಬೆಂಕಿ ಇಟ್ಟ ಆರೋಪಿಯನ್ನು ಬಂಧಿಸಿದ್ದಾರೆ. ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಹಳೆ ದ್ವೇಷಕ್ಕೆ ಬೆಂಕಿ ಇಟ್ಟಿರೋದಾಗಿ ಆರೋಪಿ ಒಪ್ಪಿಕೊಂಡಿದ್ದಾನೆ.