ಮಂಡ್ಯ:- ಮಂಡ್ಯದಲ್ಲಿ ಪುಡಿರೌಡಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಮೀಸೆ ಚಿಗುರದ ಅಪ್ರಾಪ್ತ ಬಾಲಕರ ಕ್ರೌರ್ಯ ಜಿಲ್ಲೆಯ ಜನರನ್ನ ಆತಂಕಕ್ಕೆ ಒಳಗಾಗುವಂತೆ ಮಾಡಿದೆ. ಅಂದಹಾಗೆ ಯುವತಿಯೊಬ್ಬಳ ವಿಚಾರವಾಗಿ ಮಂಡ್ಯದಲ್ಲಿ ಇತ್ತೀಚಿಗೆ ಎರಡು ಗುಂಪುಗಳ ನಡುವೆ ವಾರ್ ನಡೆದಿದೆ.
ಮಂಡ್ಯದಲ್ಲಿ ಐಟಿಐ ಮಾಡುತ್ತಿದ್ದ ಮೈಸೂರು ಜಿಲ್ಲೆಯ ಟೀ ನರಸಿಪುರ ಮೂಲದ 19 ವರ್ಷದ ಯುವಕನೊಬ್ಬನನ್ನ ಸುಮಾರು ಏಳೆಂಟು ಅಪ್ರಾಪ್ತ ಬಾಲಕರು ಮಂಡ್ಯದ ಹೊರವಲಯದ ಸ್ಮಶಾನಕ್ಕೆ ಕರೆದುಕೊಂಡು ಹೋಗಿ ಲಾಂಗ್ನಿಂದ ಮನಸ್ಸೋ ಇಚ್ಛೆ ಹಲ್ಲೆ ಮಾಡಿದ್ದಾರೆ. ಕಾಲಿನಿಂದ ಒದ್ದು, ಅವಾಚ್ಯ ಶಬ್ಧಗಳಿಂದ ಬೈದು ಬೆದರಿಕೆ ಹಾಕುವ ಜೊತೆಗೆ ಫೇಸ್ ಬುಕ್ ಲೈವ್ ಮಾಡಿದ್ದಾರೆ. ಸಂತ್ರಸ್ತ ಯುವಕ ಪರಿಪರಿಯಾಗಿ ಬೇಡಿಕೊಂಡರು ಬಿಡದ ಅಪ್ರಾಪ್ತರು ಕ್ರೌರ್ಯ ಮೆರೆದಿದ್ದಾರೆ.
ಅಂದಹಾಗೆ ಫೇಸ್ ಬುಕ್ನಲ್ಲಿ ಲೈವ್ ಆದ ಕ್ರೌರ್ಯದ ವಿಡಿಯೋ ಆನಂತರ ಜಿಲ್ಲೆಯಾದ್ಯಂತ ವೈರಲ್ ಆಗಿದೆ. ಮೀಸೆ ಚಿಗುರದ ಅಪ್ರಾಪ್ತರ ಅಟ್ಟಹಾಸ ಬೆಚ್ಚಿ ಜನತೆಯನ್ನ ಬೀಳುವಂತೆ ಮಾಡಿದೆ. ಇನ್ನು ಘಟನೆ ಸಂಬಂಧ ಸಂತ್ರಸ್ತ ಯುವಕ ದೂರು ನೀಡಲು ಹಿಂದೇಟು ಹಾಕಿದ್ದಾರೆ.
ಪ್ರಕರಣ ಸಂಬಂಧ ಮಂಡ್ಯದ ಪೂರ್ವ ಠಾಣೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದ್ದಾರೆ. ಅಲ್ಲದೆ ಉಳಿದವರಿಗಾಗಿ ಶೋಧಕಾರ್ಯ ಮುಂದುವರೆಸಿದ್ದಾರೆ.