‘ಮುದ್ದು ಲಕ್ಷ್ಮಿ’ ಸೇರಿದಂತೆ ಹಲವು ಧಾರಾವಾಹಿಗಳಲ್ಲಿ ನಟಿಸಿರುವ ನಟ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ ವಿರುದ್ದ ಇದೀಗ ಮತ್ತೊಂದು ಲೈಂಗಿಕ ಕಿರುಕುಳದ ದೂರು ದಾಖಲಾಗಿದೆ. ಈ ಹಿಂದೆ ಆರ್ಆರ್ ನಗರ ಪೊಲೀಸ್ ಠಾಣೆಯಲ್ಲಿ ಲೈಂಗಿಕ ದೌರ್ಜನ್ಯ ಪ್ರಕರಣ ದಾಖಲಾಗಿದೆ. ಇದೀಗ ಮತ್ತೊಂದು ದೂರು ದಾಖಲು ದಾಖಲಾಗಿದೆ. ಸೀರಿಯಲ್ ಶೂಟಿಂಗ್ ನೋಡಲು ಹೋಗಿದ್ದ ಮಹಿಳೆಯೊಟ್ಟಿಗೆ ಪರಿಚಯ ಬೆಳೆಸಿಕೊಂಡು ಆಕೆಯನ್ನು ಲೈಂಗಿಕ ತೃಷೆಗಾಗಿ ಚರಿತ್ ಬಾಳಪ್ಪ ಬಳಸಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಈ ಬಗ್ಗೆ ಸಂತ್ರಸ್ತೆ ದೂರು ನೀಡಿದ್ದಾರೆ.
ಧಾರಾವಾಹಿ ಶೂಟಿಂಗ್ ನೋಡಲು ಬಂದಿದ್ದ ಮಹಿಳೆಯೊಟ್ಟಿಗೆ ಪರಿಚಯ ಮಾಡಿಕೊಂಡು ಪ್ರೀತಿಸುವ ನಾಟಕವಾಡಿ ಆ ನಂತರ ಬೇರೆಯವರೊಂದಿಗೆ ಮದುವೆ ಆಗಿದ್ದನಂತೆ ಧ್ರುವಂತ್ ಅಲಿಯಾಸ್ ಚರಿತ್ ಬಾಳಪ್ಪ. ಅದಾದ ಬಳಿಕ ಯುವತಿ, ಚರಿತ್ನಿಂದ ದೂರವೇ ಉಳಿದಿದ್ದರು. ಆದರೆ ಮದುವೆ ಆದ ಬಳಿಕವೂ ಸಹ ಈ ಯುವತಿಯ ಸಂಪರ್ಕ ಬೆಳೆಸಿ, ದೈಹಿಕ ಸಂಪರ್ಕಕ್ಕೆ ಒತ್ತಾಯ ಮಾಡುತ್ತಿದ್ದನಂತೆ. ಅದಾದ ಬಳಿಕ ಯುವತಿ ಕೆಲಸ ಮಾಡುತ್ತಿದ್ದ ಜಾಗಕ್ಕೆ ಬಂದು ಗಲಾಟೆ ಸಹ ಮಾಡಿದ್ದಾರೆ ಎಂದು ಸಂತ್ರಸ್ಥೆ ದೂರು ನೀಡಿದ್ದಾರೆ.
ಸಂತ್ರಸ್ಥೆ ದೂರು ನೀಡಿದ ಬಳಿಕ ಚರಿತ್ ನನ್ನು ಠಾಣೆಗೆ ಕರೆಸಿದ ಪೊಲೀಸರು ವಾರ್ನ್ ಮಾಡಿದ್ದಾರೆ. ಆ ಬಳಿಕ ಸಂತ್ರಸ್ತೆ ತಂಟೆಗೆ ಹೋಗಲ್ಲ ಎಂದು ಚರಿತ್ ಅಪಾಲಜಿ ಬರೆದುಕೊಟ್ಟಿದ್ದ. ಬಳಿಕ ಎರಡು ವರ್ಷ ಸಂತ್ರಸ್ತ ಮಹಿಳೆ ತಂಟೆಗೆ ಹೋಗಿರಲಿಲ್ಲ, ಆದರೆ 2022ರಲ್ಲಿ ಆತನ ಹೆಂಡತಿಯೊಂದಿಗೆ ಡಿವೋರ್ಸ್ ಪಡೆದ ಬಳಿಕ ಮತ್ತೆ ಸಂತ್ರಸ್ತೆಯನ್ನು ಭೇಟಿ ಮಾಡಿ ಪುನಃ ಪ್ರೀತಿಸುವಂತೆ, ದೈಹಿಕ ಸಂಬಂಧ ಇಟ್ಟುಕೊಳ್ಳುವಂತೆ ಬಲವಂತ ಮಾಡಿದ್ದ. ಆದರೆ ಸಂತ್ರಸ್ತೆ ಒಪ್ಪದ ಕಾರಣ ಆಕೆಯ ಖಾಸಗಿ ಫೋಟೋ ಇಟ್ಟುಕೊಂಡು ಬ್ಲಾಕ್ ಮೇಲ್ ಸಹ ಮಾಡಿದ್ದನಂತೆ.
ಮರ್ಯಾದೆಗೆ ಹೆದರಿದ ಯುವತಿ ತನ್ನ ಬಳಿ ಇದ್ದ ಹಣ, ಚಿನ್ನ, ಬೆಳ್ಳಿಯ ಆಭರಣ, 23 ಕಂಚಿ ರೇಷ್ಮೆ ಸೀರೆಗಳನ್ನು ಚರಿತ್ಗೆ ನೀಡಿದ್ದರು. ಕೊನೆಗೆ ಯುವತಿ ಚರಿತ್ ವಿರುದ್ಧ ದೂರು ದಾಖಲು ಮಾಡಿದ್ದಾರೆ. ಇದೀಗ ಚರಿತ್ ಬಾಳಪ್ಪ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗುತ್ತಿದೆ.