ಭಾರತೀಯ ಚಿತ್ರರಂಗಕ್ಕೆ ಹಲವು ಖ್ಯಾತ ನಟರನ್ನು ನೀಡಿದ ಖ್ಯಾತ ನಿರ್ಮಾಪಕಿ ಸಿ ಕೃಷ್ಣವೇಣಿ ನಿಧನರಾಗಿದ್ದಾರೆ. ವಯೋಸಹಜ ಕಾಲಿಯೆಯಿಂದ ಬಳಲುತ್ತಿದ್ದ 102 ವರ್ಷದ ಕೃಷ್ಣವೇಣಿ ಇಹಲೋಕ ತ್ಯಜಿಸಿದ್ದಾರೆ. ಕೃಷ್ಣವೇಣಿ ನಿಧನಕ್ಕೆ ಹಲವರು ಕಂಬನಿ ಮಿಡಿದಿದ್ದಾರೆ.
1938 ರಲ್ಲಿ ನಟನೆ ಆರಂಭಿಸಿದ ಕೃಷ್ಣವೇಣಿ ಮೊದಲು ನಟಿಸಿದ್ದು ‘ಕಚ ದೇವಯಾನಿ’ ಸಿನಿಮಾದಲ್ಲಿ. ನಟನೆಯ ಜೊತೆಗೆ ನಿರ್ಮಾಪಕಿಯೂ ಆಗಿದ್ದ ಸಿ ಕೃಷ್ಣವೇಣಿ, ತೆಲುಗು ಚಿತ್ರರಂಗದ ದಿಗ್ಗಜ ನಟ ಎನ್ಟಿಆರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿದರು. ಎನ್ಟಿಆರ್ ಅವರ ಮೊದಲ ಸಿನಿಮಾ ‘ಮನ ದೇಸಂ’ ನ ನಿರ್ಮಾಪಕಿ ಆಗಿದ್ದ ಕೃಷ್ಣವೇಣಿ ಆ ಸಿನಿಮಾದಲ್ಲಿ ನಟಿಸಿದ್ದರು.
ಕೃಷ್ಣವೇಣಿಯ ಕುಟುಂಬದವರು ಸ್ಟುಡಿಯೋ ಸಹ ಹೊಂದಿದ್ದರು. ಹಾಗಾಗಿ ಕೆಲವು ಸಿನಿಮಾಗಳನ್ನು ಕೃಷ್ಣವೇಣಿ ನಿರ್ಮಾಣ ಮಾಡಿದ್ದರು. ಎನ್ಟಿಆರ್ ನಟನೆಯ ಮೊದಲ ಸಿನಿಮಾ ನಿರ್ಮಾಣ ಮಾಡಿದ ಜೊತೆಗೆ, ದಿಗ್ಗಜ ಗಾಯಕ ಘಂಟಸಾಲ ಅವರಿಗೂ ಮೊದಲ ಬಾರಿಗೆ ಸಿನಿಮಾದಲ್ಲಿ ಅವಕಾಶ ಕೊಟ್ಟಿದ್ದು ಇದೇ ಕೃಷ್ಣವೇಣಿಯವರು. ತೆಲುಗು ಚಿತ್ರರಂಗದ ಲೆಜೆಂಡರಿ ನಿರ್ದೇಶಕ ರಾಘವೇಂದ್ರ ರಾವ್ ಅವರಿಗೆ ಮೊದಲ ಅವಕಾಶವನ್ನು ಕೊಟ್ಟಿದ್ದು ಕೃಷ್ಣವೇಣಿ ಅವರು. ನಿರ್ಮಾಪಕಿಯಾಗಿ 12 ಸಿನಿಮಾಗಳನ್ನು ನಿರ್ಮಾಣ ಮಾಡಿದ್ದ ಕೃಷ್ಣವೇಣಿ, 40 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ಇವರು ಒಳ್ಳೆಯ ಹಾಡುಗಾರ್ತಿ ಸಹ ಆಗಿದ್ದರು.
ಕೃಷ್ಣವೇಣಿಯವರ ನಿಧನಕ್ಕೆ ತೆಲುಗು ಚಿತ್ರರಂಗ ಮಾತ್ರವೇ ಅಲ್ಲದೆ ಸಿಎಂ ಚಂದ್ರಬಾಬು ನಾಯ್ಡು ಸೇರಿದಂತೆ ಹಲವು ರಾಜಕಾರಣಿಗಳು ಸಹ ಸಂತಾಪ ವ್ಯಕ್ತಪಡಿಸಿದ್ದಾರೆ. ನಟ, ಆಂಧ್ರ ಉಪಮುಖ್ಯ ಮಂತ್ರಿ ಪವನ್ ಕಲ್ಯಾಣ್ ಸಹ ಟ್ವೀಟ್ ಮಾಡಿದ್ದು, ‘ಕೃಷ್ಣವೇಣಿ ಅವರು ಕಾಲವಾದರೆಂಬ ಸುದ್ದಿ ತಿಳಿದು ಬೇಸರವಾಯ್ತು. ಕೃಷ್ಣವೇಣಿಯವರು ತೆಲುಗು ಚಿತ್ರರಂಗದ ಮೊದಲ ನಿರ್ಮಾಪಕಿ. ನಟಿ, ಗಾಯಕಿ, ನಿರ್ಮಾಪಕಿ, ಸ್ಟುಡಿಯೋ ಮುಖ್ಯಸ್ಥೆಯಾಗಿ ಅವರು ಕಾರ್ಯ ನಿರ್ವಹಿಸಿದ್ದರು. ಶ್ರೀ ಎನ್ಟಿಆರ್, ಘಂಟಸಾಲ, ರಾಘವೇಂದ್ರ ರಾವ್ ಅಂಥಹಾ ದಿಗ್ಗಜರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಖ್ಯಾತಿ ಅವರಿಗೆ ಸಲ್ಲಬೇಕು’ ಎಂದಿದ್ದಾರೆ.