ಬೆಂಗಳೂರು, ಫೆಬ್ರವರಿ 10: ಕೇಂದ್ರ ಸರ್ಕಾರ ಟಿಕೆಟ್ ಬೆಲೆ ಏರಿಕೆಗೆ ಹಸಿರು ನಿಶಾನೆ ತೋರಿಸ್ತಿದ್ದಂತೆ, ಬಿಎಂಆರ್ಸಿಎಲ್ ದರ ಏರಿಕೆ ಮಾಡಿದೆ. ಇದರಿಂದ ಆಕೋಶಗೊಂಡ ಸಾರ್ವಜನಿಕರ ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ. ಈ ಮಧ್ಯೆ ಬಿಜೆಪಿ ನಿಯೋಗ ನಮ್ಮ ಮೆಟ್ರೋ ಪ್ರಧಾನ ಕಚೇರಿಗೆ ಭೇಟಿ ನೀಡಿ ದರ ಇಳಿಸುವಂತೆ ಮನವಿಪತ್ರ ಸಲ್ಲಿಸಿದ್ದಾರೆ.
ಬೆಂಗಳೂರಿನ ಬಿಜೆಪಿ ಶಾಸಕರಾದ ಸಿ.ಕೆ.ರಾಮಮೂರ್ತಿ, ರವಿಸುಬ್ರಹ್ಮಣ್ಯ, ಬೆಂಗಳೂರು ಉತ್ತರ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎಸ್.ಹರೀಶ್ ಮತ್ತು ಮಾಜಿ ಮೇಯರ್ ಗೌತಮ್ ಕುಮಾರ್ ಮತ್ತಿತರರಿಂದ ಬಿಎಂಆರ್ಸಿಎಲ್ ಎಂಡಿಗೆ ಮನವಿ ಸಲ್ಲಿಕೆ ಮಾಡಲಾಗಿದೆ.
ಮನವಿಪತ್ರ ಸಲ್ಲಿಕೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಸಿ.ಕೆ. ರಾಮಮೂರ್ತಿ, ಬಿಜೆಪಿ ನಿಯೋಗದಿಂದ ಮೆಟ್ರೋ ಟಿಕೆಟ್ ದರ ವಾಪಸ್ ಪಡೆಯುವಂತೆ ಮನವಿ ಮಾಡಿದ್ದೇವೆ. ಮೆಟ್ರೋ ಎಂಡಿ ಜೊತೆ ಮಾತಾಡಿ ಪ್ರಯಾಣಿಕರ ಮೇಲೆ ಹೊರೆ ಆಗುವ ಬಗ್ಗೆ ವಿವರಿಸಿದ್ದೇವೆ. ಬೇರೆ ಬೇರೆ ನಗರಗಳಲ್ಲಿ ಮೆಟ್ರೋ ಟಿಕೆಟ್ ದರ ಕಡಿಮೆ ಇದೆ ಅಂತ ಗಮನಕ್ಕೆ ತಂದಿದ್ದೇವೆ ಎಂದಿದ್ದಾರೆ.
ಸರ್ಕಾರ ಶಾಸಕರ ಜೊತೆ ಕುಳಿತು ಚರ್ಚೆ ಮಾಡಬೇಕಿತ್ತು. ಯಾವುದೋ ಕಮಿಟಿ ವರದಿ ಪಡೆದು ದರ ಏರಿಕೆ ಮಾಡಿದ್ದಾರೆ. ದರ ಏರಿಕೆ ಕಡಿಮೆ ಮಾಡಿದಿದ್ದರೆ ಹೋರಾಟ ಮಾಡುವುದಾಗಿ ಹೇಳಿದ್ದೇವೆ. ಜನಕ್ಕೆ ಹೆಚ್ಚು ಹೊರೆಯಾಗದಂತೆ ಏರಿಸಲಿ ಅಂತ ಹೇಳಿದ್ದೇವೆ ಎಂದಿದ್ದಾರೆ.
ಬಸವನಗುಡಿ ಶಾಸಕ ರವಿ ಸುಬ್ರಮಣ್ಯ ಮಾತನಾಡಿ, ದೇಶದಲ್ಲೇ ಹೆಚ್ಚಿನ ಮೆಟ್ರೋ ದರ ಕರ್ನಾಟಕದಲ್ಲಿ ಏರಿಕೆ ಮಾಡಲಾಗಿದೆ. ಮೆಟ್ರೋ ಸಂಪಾದನೆ ಮಾಡುವ ಇಲಾಖೆ ಅಲ್ಲ, ಸೇವಾ ವಲಯ ಇದು. ನಗರದ ದಟ್ಟಣೆ ಕಮ್ಮಿ ಮಾಡುವ ಸಲುವಾಗಿ ಮೆಟ್ರೋ ತರಲಾಗಿದೆ. ಏಕಾಏಕಿ ದರ ಏರಿಕೆಯನ್ನು ನಾವು ಖಂಡಿಸುತ್ತಿದ್ದೇವೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.