ಹುಬ್ಬಳ್ಳಿ: ತಾಯಿಯ ಸಾವಿನಿಂದ ಮನನೊಂದ ಮಹಿಳೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಮಂಟೂರ ರಸ್ತೆಯಲ್ಲಿ ಸಂಭವಿಸಿದೆ. ನಗರದ ಮಂಟೂರ ರಸ್ತೆ ನಿವಾಸಿ ರಂಜನಾ ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಒಂಭತ್ತು ತಿಂಗಳ ಹಿಂದೆ ಅನಾರೋಗ್ಯದಿಂದ ತಾಯಿ ಮೃತಪಟ್ಟಿದ್ದರು. ಇತ್ತೀಚೆಗೆ ತಾಯಿಯ ಪುಣ್ಯತಿಥಿಯಲ್ಲಿ ಭಾಗಿಯಾಗಿದ್ದ ರಂಜನಾ, ಗಂಡನ ಮನೆಗೆ ವಾಪಸ್ ಆಗಿದ್ದರು. ತಾಯಿಯ ಸಾವಿನ ನಂತರ ತನ್ನ ತಂದೆಯ ಒಂಟಿತನದ ಪರಿಸ್ಥಿತಿ ಕಂಡು ರಂಜನಾ ಸಾವಿನ ಹಾದಿ ಹುಡುಕಿಕೊಂಡಿದ್ದಾರೆ.
ಮನನೊಂದ ರಂಜನಾ ತನ್ನ ಗಂಡನ ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ರಂಜನಾಗೆ ಇಬ್ಬರು ಮಕ್ಕಳಿದ್ದು, ಈಗ ಆ ಮಕ್ಕಳೂ ಕೂಡ ತನ್ನ ತಾಯಿಯನ್ನು ಕಳೆದುಕೊಂಡು ಅನಾಥವಾಗಿವೆ. ರಂಜನಾ ತನ್ನ ತಾಯಿ ಪ್ರೀತಿ ಕಳೆದುಕೊಂಡು ಮೃತಪಟ್ಟಿದ್ದರೆ, ರಂಜನಾ ಮಕ್ಕಳು ಕೂಡ ತನ್ನ ತಾಯಿಯ ಪ್ರೀತಿಯನ್ನೇ ಶಾಶ್ವತವಾಗಿ ಕಳೆದುಕೊಂಡಿರುವುದು ನೋವು ತರಿಸುವಂತಿದೆ. ಶಹರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದಾರೆ.