ಹುಬ್ಬಳ್ಳಿ: ರಾಜ್ಯದಲ್ಲಿ ಬಾಣಂತಿಯರ ಸಾವಿನ ಪ್ರಕರಣ ಸಾಕಷ್ಟು ಸುದ್ಧಿಯಾಗಿತ್ತು. ಆದರೆ ನವಜಾತ ಶಿಶುಗಳ ಸಾವಿನ ಅಂಕಿಅಂಶಗಳನ್ನು ನೋಡಿದರೇ ಮಾತ್ರ ನಿಜಕ್ಕೂ ಆಘಾತಕರವಾಗಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ನವಜಾತ ಶಿಶುಗಳ ಮರಣ ಮೃದಂಗ ಬಾರಿಸುತ್ತಿದೆ. ಕಳೆದ ಒಂದೇ ವರ್ಷದಲ್ಲಿ 498 ಶಿಶುಗಳು ಸಾವನ್ನಪ್ಪಿದ್ದು, ಇದರಲ್ಲಿ 444 ಮಕ್ಕಳು ಕಿಮ್ಸ್ನಲ್ಲಿ ಜನನವಾಗಿವೆ. 54 ಮಕ್ಕಳು ಬೇರೆ ಬೇರೆ ಆಸ್ಪತ್ರೆಗಳಲ್ಲಿ ಜನಿಸಿ ಕಿಮ್ಸ್ಗೆ ಬಂದು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ. ನವಜಾತ ಶಿಶುಗಳ ಸಾವಿಗೆ ಅಪೌಷ್ಟಿಕತೆ, ತೂಕ ಕಡಿಮೆ, ನಂಜು ಕಾರಣವಾಗಿದೆ. ಉತ್ತರ ಕರ್ನಾಟಕದ ಎಂಟು ಜಿಲ್ಲೆಗಳಿಂದ ಬಾಣಂತಿಯರು ಹೆರಿಗೆಗೆ ಕೆಎಂಸಿ ಆರ್ ಐಗೆ ಬರ್ತಾರೆ. ಹೆರಿಗೆಗೆ ಬಂದ ಬಾಣಂತಿಯರು ಮಕ್ಕಳನ್ನ ಕಳೆದುಕೊಂಡ ಬರಿಗೈಯಲ್ಲಿ ವಾಪಸ್ಸು ಹೋಗುತ್ತಿರುವುದು ನಿಜಕ್ಕೂ ದುಃಖದ ಸಂಗತಿಯಾಗಿದೆ.
ಇನ್ನೂ ಹೆರಿಗೆ ಆದ ಒಂದು ತಿಂಗಳಲ್ಲೇ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಒಂಬತ್ತು ತಿಂಗಳ ಗರ್ಭದಲ್ಲಿ ಪಾಲನೆ ಪೋಷಣೆ ಮಾಡಿರುವ ತಾಯಂದಿರು ಏಕಾಏಕಿ ಮಕ್ಕಳನ್ನು ಕಳೆದುಕೊಂಡು ಮನೆಗೆ ಮರಳುತ್ತಿರುವುದು ನಿಜಕ್ಕೂ ಚಿಂತಾಜನಕ ಸಂಗತಿಯಾಗಿದೆ. ಈ ಬಗ್ಗೆ ಸರ್ಕಾರ ಮತ್ತಷ್ಟು ಯೋಜನೆ ಹಾಗೂ ನವಜಾತ ಶಿಶುಗಳ ಹಾಗೂ ಗರ್ಭಿಣಿಯರ ಆರೋಗ್ಯದ ವಿಶೇಷ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ನವಜಾತ ಶಿಶುಗಳ ಮರಣ ಪ್ರಮಾಣ ತಗ್ಗಿಸಲು ನಿರ್ಧಾರ ಕೈಗೊಳ್ಳಬೇಕಿದೆ. ಅಲ್ಲದೇ ಜನನದ ನಂತರ ಅಗತ್ಯವಿರುವ ಎನ್.ಐ.ಸಿ.ಯು ಹಾಗೂ ವೈದ್ಯಕೀಯ ಚಿಕಿತ್ಸೆಯಲ್ಲಿ ಮತ್ತಷ್ಟು ಸುಧಾರಣೆ ತರಬೇಕಿದೆ