ಬೆಂಗಳೂರು: ಕರ್ನಾಟಕಕ್ಕೆ ತಮಿಳುನಾಡಿಗಿಂತ ಕಡಿಮೆ ಹಣ ಕೊಟ್ಟಿರೋದಕ್ಕೆ ನಮಗೆ ನಾಚಿಕೆ ಆಗುತ್ತದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಜೆಟ್ನಲ್ಲಿ ಕರ್ನಾಟಕಕ್ಕೆ ತಮಿಳುನಾಡಿಗಿಂತ ಕಡಿಮೆ ಹಣ ಕೊಟ್ಟಿರೋದಕ್ಕೆ ನಮಗೆ ನಾಚಿಕೆ ಆಗುತ್ತದೆ.
ಅವರು ಏನ್ ಕೊಟ್ಟಿದ್ದಾರೆ ಅಂತ ಹೇಳಲಿ. ನಾವು ಪಕ್ಷ ಯಾವುದು ಎಂದು ನೋಡದೇ ಹೊಗಳುತ್ತೇವೆ. ಯಾವುದಾದರೂ ಯೋಜನೆ ಕೊಡಬೇಕು ಅಲ್ಲವಾ? ಬೆಂಗಳೂರು, ನೀರಾವರಿ ಯೋಜನೆಗೆ ಹಣ ಕೊಟ್ಟಿದ್ದೇವೆ ಅಂತ ಹೇಳಲಿ ನೋಡೋಣ ಎಂದು ಕಿಡಿಕಾರಿದರು. ಭದ್ರ ಯೋಜನೆಗೆ 5 ಸಾವಿರ ರೂ., ರಾಷ್ಟ್ರೀಯ ಯೋಜನೆ ಮಾಡ್ತೀವಿ ಎಂದು ಹೇಳಿ ಮಾಡಿದರಾ? ನಾವು ಬಡವರ ಹಿತದೃಷ್ಟಿಯಿಂದ ಗ್ಯಾರಂಟಿ ಯೋಜನೆ ಮಾಡಿದ್ದೇವೆ.
ರಾಜಕೀಯಕ್ಕೆ ಮಾಡಿದ್ದಾರೆ ಎಂದು ಹೇಳಿದರೂ ಕೂಡ ತಪ್ಪೇನಿಲ್ಲ. ನಾವು ಕೊಟ್ಟ ಗ್ಯಾರಂಟಿಯಿಂದ ತಾಯಿ ಮಗಳಿಗೆ ಕಂಪ್ಯೂಟರ್ ಕೊಡಿಸಿದ್ದಾರೆ. ಇಂತಹ ಅನೇಕ ಉದಾಹರಣೆ ಕೊಡಬಹುದು. ಕರ್ನಾಟಕದ ಬಳಿ ಹಣ ಇಲ್ಲ, ದಿವಾಳಿ ಆಗಿದೆ ಅನ್ನೋದು ಸರಿಯಲ್ಲ. ಹೀಗೆ ಅವರು ಮಾತನಾಡಿದರೆ ಮೊದಲು ನೀವು ಏನ್ ಮಾಡಿದ್ದೀರಾ ಕೇಳಬೇಕಾಗುತ್ತೆ ಎಂದು ವಾಗ್ದಾಳಿ ನಡೆಸಿದರು.