ಹಾಸನ: ಕರ್ನಾಟಕದಲ್ಲಿ ಮೈಕ್ರೋ ಫೈನಾನ್ಸ್ ಸಿಬ್ಬಂದಿ ಕಿರುಕುಳಕ್ಕೆ ಜನ ನಲುಗಿ ಹೋಗಿದ್ದಾರೆ. ಸಾವಿನ ಜಾಲ ಜಿಲ್ಲೆಯಿಂದ ಜಿಲ್ಲೆಗೆ ವ್ಯಾಪ್ತಿಸುತ್ತಿದೆ. ಇನ್ನೂ ಕೆಲವರು ಆತ್ಮಹತ್ಯೆ ಯತ್ನಿಸಿ, ಆಸ್ಪತ್ರೆ ಸೇರಿದ್ದಾರೆ.
ಇದೀಗ ಈ ಪೈನಾನ್ಸ್ ಕಿರುಕುಳಕ್ಕೆ ಮತ್ತೊಂದು ಜೀವ ಹೋಗಿದೆ. ಪೈನಾನ್ಸ್ ಕಿರುಕುಳಕ್ಕೆ ಹಾಸನ ಜಿಲ್ಲೆ, ಅರಕಲಗೂಡು ತಾಲ್ಲೂಕು, ಕೊಣನೂರು ಹೋಬಳಿ, ಕಂಟೇನಹಳ್ಳಿ ಗ್ರಾಮದಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ರವಿ.ಕೆ.ಡಿ. (50) ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ರೈತನಾಗಿದ್ದು, ವಿವಿಧ ಸಂಘಗಳು, ಮೈಕ್ರೋ ಫೈನಾನ್ಸ್ಗಳಿಂದ ಒಟ್ಟು 9 ಲಕ್ಷ ಸಾಲ ಮಾಡಿಕೊಂಡಿದ್ದರು.
ಸಾಲದ ಹಣ ಪಾವತಿಸುವಂತೆ ಒತ್ತಡ ಹೆಚ್ಚಾದ ಹಿನ್ನಲೆ ಮನೆಯಲ್ಲಿಯೇ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸ್ಥಳಕ್ಕೆ ಪೊಲೀಸರು ಭೇಟಿ, ಪರಿಶೀಲನೆ ನಡೆಸಿದ್ದಾರೆ. ಕೊಣನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.