ವಿಜಯನಗರ:- ಶ್ರೀರಾಮುಲುಗೆ ನೋವಾದಾಗ, ಕಾಂಗ್ರೆಸ್ ಸೇರಿ ಎಲ್ಲಾ ಪಕ್ಷದ ನಾಯಕರು ನನ್ನ ಬಗ್ಗೆ ಉತ್ತಮ ಅಭಿಪ್ರಾಯ ಹೇಳಿದ್ದಾರಷ್ಟೆ. ನನಗೆ ಪಕ್ಷ ಬಿಡು ಎಂದು ಹೇಳಲು ಯಾರಿಗೂ ಹಕ್ಕಿಲ್ಲ ಅಂತ ವಿಜಯನಗರ ಜಿಲ್ಲೆಯ ಕೂಡ್ಲಿಗಿಯಲ್ಲಿ ಮಾಜಿ ಸಚಿವ ಶ್ರೀರಾಮುಲು ಹೇಳಿದ್ರು.
ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಅವರು ದಿಲ್ಲಿಗೆ ಬರುವಂತೆ ನನಗೆ ಆಹ್ವಾನಿಸಿದ್ದಾರೆ. ಈಗ ದಿಲ್ಲಿಯಲ್ಲಿ ಚುನಾವಣೆ, ಸಂಸತ್ ಕಲಾಪ ಇರುವುದರಿಂದ ಫೆ.5 ನಂತರ ತೆರಳಿ, ರಾಷ್ಟದ ನಾಯಕರನ್ನು ಭೇಟಿಯಾಗುತ್ತೇನೆ. ಕೋರ್ ಕಮಿಟಿ ಸಭೆ ಸೇರಿ ಇತ್ತೀಚೆಗೆ ಬಿಜೆಪಿಯಲ್ಲಿ ನಡೆದ ವಿದ್ಯಮಾನಗಳ ಕುರಿತು ವರಿಷ್ಠರೊಂದಿಗೆ ಚರ್ಚಿಸಲು ಫೆ.5 ರ ನಂತರ ದಿಲ್ಲಿಗೆ ತೆರಳುತ್ತೇನೆ. ನಾನು ಯಾವುದೇ ಕಾರಣಕ್ಕೂ ಪಕ್ಷ ಬಿಡುವುದಿಲ್ಲ.
ಪಕ್ಷದಲ್ಲಿ ಬೇರೆ ಬೇರೆ ಕಡೆ ಅಪಸ್ವರ ಎದ್ದಿರುವುದು ಹಾಗೂ ಎಲ್ಲರೂ ಒಗ್ಗಟ್ಟಾಗಿ 2028 ರಲ್ಲಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಪಕ್ಷದ ಸಂಘಟನೆ ಕುರಿತು ಚರ್ಚಿಸತ್ತೇನೆ. ಪಕ್ಷದ ನಾಯಕರಾದ ಯತ್ನಾಳ್, ರಮೇಶ್ ಜಾರಕಿಹೊಳಿ, ಡಾ.ಸುಧಾಕರ್ ಸೇರಿ ನಾನಾ ನಾಯಕರ ಅಸಮಾಧಾನದ ಕುರಿತು ಕೇಳಿದ ಪ್ರಶ್ನೆಗೆ, ಎಲ್ಲಾ ಪಕ್ಷದಲ್ಲೂ ಇದು ಸಾಮಾನ್ಯ. ಎಲ್ಲರೂ ಪಕ್ಷದ ವರಿಷ್ಠರ ತೀರ್ಮಾನಕ್ಕೆ ಬದ್ಧರಾಗಿ ಸಂಘಟನೆಯಲ್ಲಿ ತೊಡಗಬೇಕಾಗುತ್ತದೆ ಅಂತ ಮಾಜಿ ಸಚಿವ ಶ್ರೀರಾಮುಲು ಹೇಳಿದ್ರು.