ಮಹದೇವಪುರ: ನಿಸ್ವಾರ್ಥದಿಂದ ನಿತ್ಯ ಜನಪರವಾಗಿ ಹೋರಾಡುವವರನ್ನು ಸಮಾಜ ಸದಾ ಸ್ಮರಿಸುತ್ತದೆ. ಆದರೆ ಹೋರಾಟದ ಹಾದಿ ಸದಾ ಕಲ್ಲು, ಮುಳ್ಳುಗಳಿಂದ ಕೂಡಿರುತ್ತದೆ. ಹೋರಾಟಗಾರರು ಅವೆಲ್ಲವನ್ನು ಮೆಟ್ಟಿನಿಂತು ಜನ ಸಾಮಾನ್ಯರ ಹಾಗೂ ಸಾರ್ವಜನಿಕರ ನ್ಯಾಯಕ್ಕಾಗಿ ಹೋರಾಟ ಮಾಡಬೇಕು ಎಂದು ಭೀಮವಾದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕ ಬಿ.ಎನ್.ವೆಂಕಟೇಶ್ ತಿಳಿಸಿದರು.
ಕ್ಷೇತ್ರದ ಎ.ಕೆ.ಜಿ ಕಾಲೋನಿ, ಪಟಾಲಮ್ಮ ಬಡಾವಣೆ ಹಾಗೂ ಬೆಳತೂರಿನಲ್ಲಿ ನೂತನ ಗ್ರಾಮ ಶಾಖೆಗಳನ್ನು ಉದ್ಘಾಟಿಸಿ ಅವರು ಮಾತನಾಡಿದರು, ಸಮಾಜದಲ್ಲಿರುವ ಬಡವರು, ಶೋಷಣೆಗೆ ಒಳಗಾದವರನ್ನು ಮೇಲೆತ್ತುವ ಕೆಲಸವನ್ನು ಸಂಘಟನೆಗಳು ಮಾಡಬೇಕು, ಅವರ ಜೀವನಕ್ಕೆ ಆಸರೆಯಾಗಿ ಬೆಳಕಾಗಬೇಕು ಆಗ ಸಮಸಮಾಜದಲ್ಲಿ ಎಲ್ಲರಿಗೂ ಇಂದು ಉತ್ತಮ ಸ್ಥಾನಮಾನ ಸಿಗುತ್ತದೆ ಎಂದರು.
ಭೀಮವಾದ ದಲಿತ ಸಂಘರ್ಷ ಸಮಿತಿ ಕೇವಲ ಹೋರಾಟ ಮಾಡುವುದಿಲ್ಲ, ಬದಲಾಗಿ ಹೋರಾಟದ ಜೊತೆಗೆ ಮಾನವೀಯ ಮೌಲ್ಯಗಳೊಂದಿಗೆ ಕೆಲಸಮಾಡಲಿದೆ, ಸಂಘಟನೆಯಿಂದ ಮರಣ ಹೊಂದಿದ ಕುಟುಂಬಕ್ಕೆ ಧನಸಹಾಯ, ಅನಾರೋಗ್ಯ ಪೀಡಿತರಿಗೆ ನೆರವು, ವಿಧವೆಯರು,ಅಂಗವಿಕಲರಿಗೆ ಸಹಾಯಹಸ್ತ, ಮಕ್ಕಳ ಶಿಕ್ಷಣಕ್ಕೆ ನೆರವು ಸೇರಿದಂತೆ ಇನ್ನೂ ಹಲವು ಸೇವಾಕಾರ್ಯಗಳನ್ನು ಮಾಡಲಿದೆ, ರಾಜ್ಯದ ಬೇರೆ ಯಾವುದೇ ಸಂಘಟನೆ ಮಾಡದ ಕೆಲಸವನ್ನು ನಮ್ಮ ಸಂಘಟನೆ ಮಾಡಲಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಂಘಟನೆ ಸಂಚಾಲಕ ಸಿದ್ದರಾಜು, ಕೆ.ಕುಮಾರ್, ನಾಗವೇಣಿ,ದಿವ್ಯ, ಎಸ್.ಬಾಬು,ಮಂಜುನಾಥ್, ಪ್ರೇಮಕುಮಾರ್,ಕರುಣಾಕರನ್, ಸಾಕಪ್ಪ ಮತ್ತಿತರರು ಇದ್ದರು.