ಗದಗ: ಈ ಜಿಲ್ಲೆಯಲ್ಲೂ ಕಳೆದ ಒಂದುವಾರದಿಂದ ಸುರೀತಿರುವ ನಿರಂತರ ಮಳೆ ಅವಾಂತರವನ್ನೇ ಸೃಷ್ಟಿ ಮಾಡಿದೆ. ಗದಗ ನಗರದ ಖಾನತೋಟ ಜನತಾ ಕಾಲೊನಿಯ ಮಣ್ಣಿನ ಮನೆಗಳು ನಿರಂತರ ಮಳೆಗೆ ನೆನೆದು ಸಂಪೂರ್ಣವಾಗಿ ಶಿಥಿಲಗೊಂಡಿವೆ.
ಈರಮ್ಮ ಮುಳಗುಂದ ಅನ್ನುವ ವೃದ್ಧೆ ವಾಸವಿರುವ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ. ಎಲ್ಲಂದರಲ್ಲಿ ಗೋಡೆ ಕುಸಿದಿದೆ. ಮನೆಯಲ್ಲಿ ಮೂರು ಜನ ವಾಸವಿದ್ದು, ಜೀವ ಕೈನಲ್ಲಿ ಹಿಡಿದು ಬದುಕುವಂತಾಗಿದೆ. ಪರಿಶೀಲನೆಗೆ ನಗರ ಸಭೆ ಅಧಿಕಾರಿಗಳು, ಸಿಬ್ಬಂದಿಗಳು ಬಂದ ಸಂದರ್ಭದಲ್ಲಿ ಸಂತ್ರಸ್ತರು ಅಳಲು ತೋಡಿಕೊಂಡರು.
ಮನೆಗಾಗಿ ಅಲೆದು ಸುತ್ತಾದ ಸಂತ್ರಸ್ತರು ಅಧಿಕಾರಿಗಳು ಹಾಗೂ ನಗರಸಭೆ ವಾರ್ಡ್ ಸದಸ್ಯೆ ಪರವೀನ ಬಾನು ಮುಲ್ಲಾ ಹಾಗೂ ಪತಿ ಅಬ್ದುಲ್ ಮುನಾಫ್ ಮುಲ್ಲಾ ಅವರನ್ನು ಚಳಿ ಬಿಡಿಸಿದರು. ಇಡೀ ಮನೆ ಕುಸಿದು ಯಾವಾಗ ಬೀಳತ್ತೋ ಅನ್ನುವ ಆತಂಕದಲ್ಲೇ ಜೀವನ ಸಾಗಿಸುವಂತಾಗಿದೆ. ಬೇರೆ ದಾರಿ ಇಲ್ಲದೇ ಅದೇ ಮನೆಯಲ್ಲೇ ಈರಮ್ಮ ಮಗಳೊಂದಿಗೆ ವಾಸವಿದ್ದಾಳೆ.
ಸಂತ್ರಸ್ತೆ ಈರಮ್ಮ ಹಾಗೂ ಆಕೆಯ ಮಗಳಿಗೆ ಬೇರೆಡೆ ಮನೆ ಬಾಡಿಗೆ ಪಡೆದು ಜೀವನ ನಡೆಸುವಷ್ಟು ಶಕ್ತಿ ಇಲ್ಲ. ಹಾಗಾಗಿ ಬೀಳುವ ಸ್ಥಿತಿಯಲ್ಲಿರುವ ಮನೆಯಲ್ಲಿ ಅನಿವಾರ್ಯವಾಗಿ ವಾಸ ಮಾಡ್ತಿದ್ದಾರೆ. ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಕೂಡಾ ಸರ್ಕಾರದ ಸಹಾಯಹಸ್ತ ಸಿಕ್ಕಿಲ್ಲ ಅಂತಾ ತಮ್ಮ ಅಳಲು ತೋಡಿಕೊಂಡ್ರು.
ಸ್ಥಳಿಯ ಶಾಸಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ ಪಾಟೀಲ್ ಸ್ಥಳಕ್ಕೆ ಬರಬೇಕು. ನಮ್ಮ ಅಳಲು ಕೇಳಬೇಕು, ನಮಗೊಂದು ಸೂರು ಕೊಡಬೇಕು ಅಂತ ಪಟ್ಟು ಹಿಡಿದರು.