ಗದಗ: ಕಳೆದ ಕೆಲ ದಿನಗಳಿಂದ ಬಿಟ್ಟು ಬಿಡದಂತೆ ಸುರೀತಿರೋ ನಿರಂತರ ಮಳೆ ಅವಾಂತರವನ್ನೇ ಸೃಷ್ಟಿ ಮಾಡಿದೆ. ಗದಗ ನಗರದ ಖಾನತೋಟ ಜನತಾ ಕಾಲೊನಿಯಲ್ಲಿನ ಕೆಲ ಮಣ್ಣಿನ ಮನೆಗಳು ನಿರಂತರ ಮಳೆಗೆ ನೆನೆದು ಸಂಪೂರ್ಣವಾಗಿ ಶಿಥಿಲಗೊಂಡಿವೆ.
ಈರಮ್ಮ ಮುಳಗುಂದ ಅನ್ನೋ ವೃದ್ಧೆ ವಾಸವಿರೋ ಮನೆಯ ಗೋಡೆಗಳು ಬಿರುಕು ಬಿಟ್ಟಿವೆ, ಅಲ್ಲಲ್ಲಿ ಗೋಡೆ ಕುಸಿದಿದೆ. ಗೋಡೆಯ ಮಣ್ಣಿನ ಪ್ಲಾಸ್ಟರ್ ಕಿತ್ತು ಹೋಗಿದ್ದು ಯಾವಾಗ ಇಡೀ ಮನೆ ಕುಸಿದು ಬೀಳತ್ತೋ ಅನ್ನೋ ಆತಂಕದಲ್ಲೇ ಜೀವನ ಸಾಗಿಸುವಂತಾಗಿದೆ.
ಬೇರೆ ದಾರಿ ಇಲ್ಲದೇ ಅದೇ ಮನೆಯಲ್ಲೇ ಈರಮ್ಮ ಮಗಳೊಂದಿಗೆ ವಾಸವಿದ್ದಾಳೆ. ಅಂದಿನ ಕೂಲಿ ಕೆಲಸದ ದುಡಿಮೆಯಲ್ಲಿಯೇ ಅಂದಿನ ಜೀವನ ನಡೆಸುವ ಸ್ಥಿತಿಯಲ್ಲಿರುವ ಈರಮ್ಮ ಹಾಗೂ ಆಕೆಯ ಮಗಳಿಗೆ ಬೇರೆಡೆ ಮನೆ ಬಾಡಿಗೆ ಪಡೆದು ಜೀವನ ನಡೆಸುವಷ್ಟು ಶಕ್ತಿ ಇಲ್ಲ.
ಹಾಗಾಗಿ ಬೀಳೋ ಸ್ಥಿತಿಯಲ್ಲಿರುವ ಮನೆಯಲ್ಲಿ ಜೀವ ಕೈಲಿ ಹಿಡಿದು ವಾಸ ಮಾಡ್ತಿದ್ದಾರೆ. ಇದನ್ನ ಕಂಡ ಇನ್ನೊಬ್ಬ ಮಗಳು ತಾತ್ಕಾಲಿಕವಾಗಿ ತಾಯಿಯನ್ನ ತನ್ನ ಮನೆಯಲ್ಲಿ ಇರಿಸಿಕೊಂಡಿದ್ದಾರೆ. ಹಲವಾರು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದ್ರೂ ಕೂಡಾ ಸರಕಾರದ ಸಹಾಯಹಸ್ತ ಸಿಕ್ಕಿಲ್ಲ ಅಂತಾ ತಮ್ಮ ಅಳಲನ್ನ ತೋಡಿಕೊಂಡ್ರು.
ನನಗೆ ಮನೆ ಕೊಡಿಸಿ ಪುಣ್ಯ ಕಟ್ಟಿಕೊಳ್ಳಿ ಅಂತಾ ಕಣ್ಣೀರು ಸುರಿಸಿ ಮನವಿ ಮಾಡಿದ್ರು.