ದಾಸರಹಳ್ಳಿ: ರಾಜಧಾನಿ ಬೆಂಗಳೂರಿನಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದ ಸಾಕಷ್ಟು ಅವಾಂತರ ಸೃಷ್ಟಿ ಆಗಿದೆ.
ಮನೆಗಳು ಅಂಗಡಿಗಳಿಗೆ ಮಳೆಯ ನೀರು ನುಗ್ಗಿದ್ದು, ಗಾಣಿಗರಹಳ್ಳಿ ಕೆರೆ ಕೋಡಿಯ ಹಳ್ಳಗಳು ತುಂಬಿ ಹರಿಯುತ್ತಿವೆ. ಟಿ.ದಾಸರಹಳ್ಳಿಯ ಕ್ಷೇತ್ರದಲ್ಲಿ ಗಾಣಿಗರಹಳ್ಳಿ ಕೆರೆ ಸಂಪೂರ್ಣವಾಗಿ ಭರ್ತಿ ಆಗಿದೆ. ಕೆರೆಯ ನೀರು ನುಗ್ಗಿ ಚಿಕ್ಕಬಾಣಾವಾರದ ಮಾರುತಿನಗರ ಜಲಾವೃತ ಆಗಿದೆ. ಮಾರುತಿ ನಗರದ ಐದಾರು ಮನೆಗಳು ಹಾಗೂ ಅಂಗಡಿಗಳಿಗೆ ನೀರು ನುಗ್ಗಿದೆ.
ಇನ್ನಷ್ಟು ಮನೆಗಳು ಅಂಗಡಿಗಳು ಜಲಾವೃತ ಆಗುವ ಆತಂಕ ಎದುರಾಗಿದೆ. ರಸ್ತೆಗಳಲ್ಲಿ ನೀರು ತುಂಬಿ ಹರಿಯುತ್ತಿದ್ದು, ಜೋರಾಗಿ ಹರಿಯುತ್ತಿರುವ ನೀರಿನಲ್ಲಿ ಪುಟಾಣಿಗಳು ಆಟ ಆಡುತ್ತಿದ್ದಾರೆ.
ವಾಹನಗಳು ನೀರಿನಲ್ಲಿ ಜಲಾವೃತ ಆಗಿದ್ದು, ಇನ್ನಷ್ಟು ತಗ್ಗು ಪ್ರದೇಶಗಳು ಜಲಾವೃತ ಆಗುವ ಆತಂಕ ಎದುರಾಗಿದೆ.