ಬೆಂಗಳೂರು: ಪರಿಶಿಷ್ಟ ಪಂಗಡಗಳ ಜಾತಿ ಪ್ರಮಾಣಪತ್ರದಲ್ಲಿರುವ ಗೊಂದಲ ನಿವಾರಣೆಗೆ ಆದೇಶ ಹೊರಡಿಸುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಪರಿಶಿಷ್ಟ ಪಂಗಡ ಸಮುದಾಯಗಳ ಸಮಸ್ಯೆ ಕುರಿತು ಸಿಎಂ ಸಭೆ ನಡೆಸಿದರು. ಸಭೆ ಬಳಿಕ ಪ್ರತಿಕ್ರಿಯೆ ನೀಡಿದ ಸಿಎಂ, ಎಸ್ಟಿ ಸಮುದಾಯದ ಎಮ್ಎಲ್ಎಗಳು, ಸ್ವಾಮೀಜಿಗಳು ಸಮಸ್ಯೆ ಬಗ್ಗೆ ಮನವಿ ಮಾಡಿದ್ದರು. ವಾಲ್ಮೀಕಿ ನಿಗಮದ ಅನುದಾನವನ್ನು ಕಡಿತ ಮಾಡಬಾರದು ಎಂದು ಮನವಿ ಮಾಡಿದ್ದರು. ಎಸ್ಟಿ ಸಮುದಾಯದಲ್ಲಿ ಜಾತಿ ಪ್ರಮಾಣಪತ್ರವನ್ನು (Caste Certificate) ಕೆಲವರು ಸುಳ್ಳು ಹೇಳಿ ಪಡೆಯುತ್ತಿದ್ದಾರೆ. ಈ ಬಗ್ಗೆ ಕ್ರಮಕ್ಕೆ ಮನವಿ ಮಾಡಿದ್ದರು. ಹಾಗಾಗಿ, ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದರು.
ವಾಲ್ಮೀಕಿ ನಿಗಮಕ್ಕೆ ಎಷ್ಟು ಅನುದಾನ ನಿಗದಿಯಾಗಿತ್ತೋ ಅಷ್ಟು ಕೊಡುತ್ತೇವೆ. ವಾಲ್ಮೀಕಿ ನಿಗಮದಲ್ಲಿ 89.63 ಕೋಟಿ ರೂ. ಅಕ್ರಮ ಆಗಿತ್ತು. ಈಗ 5 ಕೋಟಿ ರೂ. ವಾಪಸ್ ಬಂದಿದೆ. 71.54 ಕೋಟಿ ರೂ. ಎಸ್ಐಟಿ ಅವರು ರಿಕವರಿ ಮಾಡಿದ್ದಾರೆ. ಉಳಿದ 13 ಕೋಟಿ ರೂ. ರಿಕವರಿ ಆಗಬೇಕು. ಅದನ್ನು ಮಾಡೋದಾಗಿ ಎಸ್ಐಟಿ ಅವರು ಹೇಳಿದ್ದಾರೆ. 13 ಕೋಟಿ ರೂ. ರಿಕವರಿ ಆದ್ರೆ ಎಷ್ಟು ಅಕ್ರಮ ಅಗಿದೆ ಅಂತ ನಮಗೆ ಮಾಹಿತಿ ಸ್ಪಷ್ಟವಾಗಿ ತಿಳಿಯಲಿದೆ. ಸದ್ಯ ಕೋರ್ಟ್ ಮುಂದೆ ಕೇಸ್ ನಡೆಯುತ್ತಿದೆ. ಕೋರ್ಟ್ನಲ್ಲಿ ಏನು ತೀರ್ಮಾನ ಆಗುತ್ತೆ ಅದರಂತೆ ನಾವು ನಡೆದುಕೊಳ್ಳುತ್ತೇವೆ ಎಂದು ಹೇಳಿದರು.