ಹುಬ್ಬಳ್ಳಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತ ಕಳೆದುಕೊಂಡಿದ್ದಾರೆ. ಮೊದಲು ಇದಕ್ಕೆ ಚಿಕಿತ್ಸೆ ಪಡೆಯಲಿ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಸಲಹೆ ನೀಡಿದ್ದಾರೆ. “ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಭಯೋತ್ಪಾದಕ” ಎಂದ ಸಿಎಂಗೆ ಜೋಶಿ ತಿರುಗೇಟು ನೀಡಿದರು.
ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವರು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಧಿಕಾರ ಕಳೆದುಕೊಳ್ಳೋ ಹತಾಶೆಯಲ್ಲಿ ಮಾನಸಿಕ ಸ್ಥಿಮಿತ ಕಳೆದುಕೊಂಡು ಹೀಗೆ ಏನೇನೋ ಹೇಳುತ್ತಿದ್ದಾರೆ ಎಂದು ಟೀಕಿಸಿದರು. ಮೂಡಾ, ವಾಲ್ಮೀಕಿ ಹಗರಣದಿಂದಾಗಿ ಸಿದ್ದರಾಮಯ್ಯ ಅವರು ಸಿಎಂ ಕುರ್ಚಿ ಕಳೆದುಕೊಳ್ಳುವುದು ನಿಚ್ಚಳವಾಗಿದೆ. ಅಧಿಕಾರ ಹೋಗೋ ಕನಸು ಬೀಳುತ್ತಿದೆ ಅವರಿಗೆ. ಹೀಗಾಗಿ ತೀವ್ರ ಹತಾಶೆಗೆ ಒಳಗಾಗಿದ್ದಾರೆ ಎಂದು ಹೇಳಿದರು.
ಅತ್ಯಂತ ಅಪ್ರಬುದ್ಧ ಹೇಳಿಕೆ: ರಾಜಕಾರಣದಲ್ಲಿ ಅಧಿಕಾರ ಬರುತ್ತದೆ, ಹೋಗುತ್ತದೆ. ಈ ಹತಾಶೆಯಲ್ಲಿ ಸಿಎಂ ಹೀಗೆ ಅತ್ಯಂತ ಅಪ್ರಬುದ್ಧ ಮತ್ತು ಚಿಲ್ಲರೆ ಹೇಳಿಕೆ ಕೊಡುತ್ತಿದ್ದಾರೆ ಎಂದು ಸಚಿವ ಜೋಶಿ ತಿರುಗೇಟು ನೀಡಿದರು. ಮೂಡಾ ಹಗರಣದಲ್ಲಿ ಸಿಎಂಗೆ ಹೈಕೋರ್ಟ್ ಸಿಕ್ಕಾಪಟ್ಟೆ ಝಾಡಿಸಿದೆ. ಅದರಿಂದ ಹೊರ ಬರಲು ಆಗುತ್ತಿಲ್ಲ ಅವರಿಗೆ. ಸಾಲದ್ದಕ್ಕೆ ರಾಜೀನಾಮೆ ಒತ್ತಡ ಬೇರೆ. ಇದೆಲ್ಲದರ ಪರಿಣಾಮ ಸಿದ್ದರಾಮಯ್ಯ ಅವರು ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ ಮೊದಲು ಚಿಕಿತ್ಸೆ ಪಡೆಯುವುದು ಉತ್ತಮ ಎಂದು ಟಾಂಗ್ ಕೊಟ್ಟರು ಪ್ರಲ್ಹಾದ ಜೋಶಿ.
ಒಂದು ಚಮಚ ಜೇನುತುಪ್ಪ ಸೇವಿಸಿದರೆ ಸಿಗುತ್ತೆ ಹಲವು ಆರೋಗ್ಯಕರ ಲಾಭಗಳು..!
ಸಿದ್ದರಾಮಯ್ಯ ಅವರು ಮೊದಲೂ ನಮ್ಮನ್ನು ಅವರು ಟೀಕೆ ಮಾಡುತ್ತಿದ್ದರು. ನಾವು ಅವರನ್ನು ಟೀಕೆ ಮಾಡುತ್ತಿದ್ದೆವು. ಆದರೆ, ಯಾವತ್ತೂ ಹೀಗೆ ಅಪ್ರಬುದ್ಧ ಹೇಳಿಕೆ ಕೊಡುತ್ತಿರಲಿಲ್ಲ. ಈಗ ತೀರಾ ಹತಾಶರಾಗಿದ್ದಾರೆ. ರಾಜಕಾರಣದಲ್ಲಿ ಅಧಿಕಾರ ಬರೋದು – ಹೋಗೋದು ಸಹಜ. ಆದರೆ, ಹೀಗೆ ಹತಾಶರಾಗಬಾರದು ಎಂದು ಸಚಿವ ಜೋಶಿ ಸಲಹೆ ಮಾಡಿದರು.
ಆರೆಸ್ಸೆಸ್ ಆಗಲಿ ಭಜರಂಗದಳ ಆಗಲಿ ಯಾವುದರ ಮೇಲೂ NIA ಕೇಸ್ ಗಳು ಇಲ್ಲ. ಹಿಂದೆ ಅಧಿಕಾರಿಗಳು ತಪ್ಪು ಮಾಡಿದ್ದರೆ ಹಾಗಾದರೆ? ರಾಜಕಾರಣಿಗಳು ಕೇಸ್ ಮಾಡುತ್ತಾರೆಯೇ? ಈಗ ನೀವು ಕೇಸ್ ಮಾಡುತ್ತಿದ್ದೀರಾ ಹಾಗಾದರೆ? ಎಂದು ಸಿಎಂಗೆ ಪ್ರಶ್ನೆ ಮಾಡಿದರು ಜೋಶಿ.