ಮೈಸೂರು: ಇನ್ನೊಬ್ಬರ ಬದುಕನ್ನು ಯಾರು ಹಾಳು ಮಾಡಲು ಪ್ರಯತ್ನ ಮಾಡ್ತಿದ್ದಾರೆ ಅವರಿಗೆಲ್ಲಾ ಸದ್ಬುದ್ಧಿ ಕೊಡಲಿ ಎಂದು ಪ್ರಾರ್ಥನೆ ಮಾಡುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಸುತ್ತೂರು ಶಾಖಾ ಮಠಕ್ಕೆ (Suttur Mutt) ಸಿಎಂ ಭೇಟಿ ನೀಡಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದರು. ಈ ವೇಳೆ, ವಿಜಯದಶಮಿ ಹಬ್ಬ ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಮಾಡುವಂತಹ ಹಬ್ಬ. ನಾಡಿನೆಲ್ಲೆಡೆ ಇದು ನಡೆಯಲಿ ಎಂದು ಜನತೆಗೆ ವಿಜಯದಶಮಿಯ ಶುಭ ಹಾರೈಸಿದ್ದಾರೆ.
ಈ ಬಾರಿ ಚೆನ್ನಾಗಿ ಮಳೆ ಬೆಳೆ ಆಗಿದೆ. ರೈತರ ಮೊಗದಲ್ಲಿ ಸಂಭ್ರಮ ಕಾಣುತ್ತಿದೆ. ರೈತರಿಗೆ ಉತ್ತಮವಾಗಿ ಮಳೆ ಆದ್ರೆ ಅದಕ್ಕಿಂತ ಸಂತೋಷ ಬೇರಿಲ್ಲ. ಕಳೆದ ವರ್ಷ ಬರಗಾಲ ಇತ್ತು. ಈ ವರ್ಷ ಎಲ್ಲಾ ಜಲಾಶಯ ಭರ್ತಿ ಆಗಿವೆ ಎಂದಿದ್ದಾರೆ.
ಶ್ರೀಗಳ ಜೊತೆಗೆ ಸಿದ್ದರಾಮಯ್ಯ ಗೌಪ್ಯ ಮಾತುಕತೆ ನಡೆಸಿದ್ದಾರೆ. ಮಠಕ್ಕೆ ಭೇಟಿ ನೀಡಿದ ವೇಳೆ ಸಿಎಂಗೆ ಪೂರ್ಣ ಕುಂಭ ಸ್ವಾಗತ ಕೋರಲಾಗಿದೆ. ಬಳಿಕ ಮಠದ ಆವರಣದಲ್ಲಿರುವ ಚಾಮುಂಡೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದಿದ್ದಾರೆ. ಇದೇ ವೇಳೆ ಮಠದಲ್ಲಿ ಉಪಹಾರ ಸೇವಿಸಿದ್ದಾರೆ. ಸಿಎಂಗೆ ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಸಿ ಮಹದೇವಪ್ಪ, ಸಚಿವೆ ಲಕ್ಷಿ ಹೆಬ್ಬಾಳ್ಕರ್, ಶಾಸಕ ರವಿಶಂಕರ್ ಸಾಥ್ ನೀಡಿದ್ದಾರೆ.