ಬೆಂಗಳೂರು: ನಾಡಿನೆಲ್ಲೆಡೆ ದಸರಾ ಹಬ್ಬ ನವರಾತ್ರಿ ಸಂಭ್ರಮ. ಈ ಹಿನ್ನೆಲೆ ಮನೆಗಳಲ್ಲಿ ಬೊಂಬೆಗಳನ್ನು ಕೂರಿಸಿ ಪೂಜಿಸಲಾಗುತ್ತದೆ. ಅದೇ ರೀತಿ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಯೂ ಬೊಂಬೆಗಳನ್ನು ಕೂರಿಸಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿ ವಿದೇಶಿಗರನ್ನು ಆಕರ್ಷಿಸುತ್ತಿದೆ. ಈ ಕುರಿತು ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ ನೋಡಿ.
ಹೌದು ಹೀಗೆ ವೇದಿಕೆಯ ಮೇಲೆ ಯಕ್ಷಗಾನ ನೃತ್ಯ, ತಮಟೆ ವಾದ್ಯ, ತಮಟೆ ಸದ್ದಿಗೆ ಭರ್ಜರಿ ಸ್ಟೆಪ್ ಹಾಕುತ್ತಿರುವ ಸಿಬ್ಬಂದಿಗಳು, ಈ ಎಲ್ಲಾ ದೃಶ್ಯಗಳು ಕಂಡುಬಂದಿದ್ದು ದೇವನಹಳ್ಳಿ ಸಮೀಪದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ. ನವರಾತ್ರಿ ಹಿನ್ನಲೆಯಲ್ಲಿ ಏರ್ಪೋರ್ಟ್ ನ ಟರ್ಮಿನಲ್ ಒಂದು ಮತ್ತು ಟರ್ಮಿನಲ್ ಎರಡರಲ್ಲಿ, ನವರಾತ್ರಿಯ ವಿಶೇಷತೆಯನ್ನು ಸಾರುವ ಬೊಂಬೆಗಳನ್ನು ಕೂರಿಸಲಾಗಿದೆ ಏರ್ಪೋರ್ಟ್ ನ ಹೊರಗೆ ಒಂದು ವೇದಿಕೆಯನ್ನು ನಿರ್ಮಿಸಿ ಪ್ರತಿನಿತ್ಯ ಎರಡು ಬಾರಿ ವಿವಿಧ ಜಾನಾಪದ ಕಲಾತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನ ಆಯೋಜನೆ ಮಾಡಲಾಗುತ್ತಿದೆ. ಇದೇ ತಿಂಗಳ 7 ರಿಂದ ಪ್ರಾರಂಭವಾಗಿ 11 ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮಗಳು ಮುಕ್ತಯಾಗೊಳ್ಳುತ್ತವೆ ಡೊಳ್ಳು ಕುಣಿತ, ಯಕ್ಷಗಾನ, ತಮಟೆ ವಾದ್ಯ, ಸುಗಮ ಸಂಗೀತ, ಶಾಸ್ತ್ರೀಯ ಸಂಗೀತ, ಜೊತೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ. ಕೆಲಸದ ಒತ್ತಡದಲ್ಲಿ ಸ್ವಗ್ರಾಮಗಳಲ್ಲಿ ನವರಾತ್ರಿಗೆ ಹೋಗಲು ಆಗದೆ ಇರುವ ಸಿಬ್ಬಂದಿಗಳು ತಮಟೆ ಸದ್ದು ಕೇಳುತ್ತಿದ್ದಂತೆ ಭರ್ಜರಿ ಸ್ಟೆಪ್ ಹಾಕಿ ಕುಣಿದು ಕುಪ್ಪಳಿಸಿದರು. ಇನ್ನೂ ಲಕ್ಷ್ಮೀ, ಚಾಮುಂಡಿ, ಕೃಷ್ಣ, ನವ ದುರ್ಗೆಯರ ಬೊಂಬೆಗಳು ವಿದೇಶಿ ಪ್ರಯಾಣಿಕರನ್ನು ಕೈ ಬೀಸಿ ಕರೆಯುತ್ತಿವೆ ಹಾಗಾಗಿ ವಿದೇಶಿ ಪ್ರಜೆಗಳು ಕೂಡ ಸೆಲ್ಫಿ ತೆಗೆದುಕೊಂಡು ನಾಡಿನ ಜನರಿಗೆ ವಿಜಯ ದಶಮಿಯ ಶುಭಾಶಯಗಳನ್ನು ತಿಳಿಸಿದರು.
ಇನ್ನೂ ಟರ್ಮಿನಲ್ ಎರಡರಲ್ಲಿ ಅತೀ ಹೆಚ್ಚು ವಿದೇಶಿ ಪ್ರಯಾಣಿಕರು ಆಗಮಿಸುತ್ತಾರೆ. ಅಲ್ಲದೆ ದಿನನಿತ್ಯಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಲಕ್ಷಾಂತರ ಮಂದಿ ಪ್ರಯಾಣ ಬೆಳೆಸುತ್ತಾರೆ. ಹಾಗಾಗಿ ಬೊಂಬೆಗಳನ್ನ ಕೂರಿಸಿರುವುದರಿಂದ ಏರ್ಪೋರ್ಟ್ ನ ಹೊರ ಬರುತ್ತಿದ್ದಂತೆ ಒಂದು ರೀತಿಯ ಹಬ್ಬದ ವಾತಾವರಣವಿದ್ದು ಯಾವುದೋ ಕಾರಣಗಳಿಂದ ಮನೆಯಲ್ಲಿ ಬೊಂಬೆಗಳನ್ನು ಕೂರಿಸಲು ಆಗದೇ ಇದ್ದ ಪ್ರಯಾಣಿಕರು ಏರ್ಪೋರ್ಟ್ ನಲ್ಲಿಯೇ ಬೊಂಬೆಗಳನ್ನು ನೋಡಿ ಸಂತೋಷದಿಂದ ಪ್ರಯಾಣ ಬೆಳೆಸುತ್ತದ್ದಾರೆ ಇನ್ನೂ ಪ್ರಮುಖವಾಗಿ ವಿದೇಶಿ ಪ್ರಯಾಣಿಕರು ಬೆಂಗಳೂರಿಗೆ ಎಂಟ್ರಿ ಆಗುತ್ತಿದ್ದಂತೆ ಈ ನೆಲದ ಸಂಸ್ಕೃತಿಯನ್ನು ಕಣ್ಣು ತುಂಬಿಕೊಂಡು ರಾಜ್ಯಕ್ಕೆ ಎಂಟ್ರಿ ಕೊಡುತ್ತದ್ದಾರೆ ಕೆಲವರು ಏರ್ಪೋರ್ಟ್ ನಡೆಯುತ್ತಿದ್ದ ಕಾರ್ಯಕ್ರಮಗಳನ್ನು ವೀಕ್ಷಣೆ ಮಾಡಿ, ಅವರ ಕ್ಯಾಮರಾದಲ್ಲಿ ಚಿತ್ರೀಕರಿಸಿ ಮುಂದೆ ನಡೆದರು.
ಒಟ್ಟಾರೆ ನಾಡಿನೆಲ್ಲೆಡೆ ದಸರಾ ಸಂಭ್ರಮ ಮನೆ ಮಾಡಿದ್ದರೆ, ಏರ್ಪೋರ್ಟ್ ಸಿಬ್ಬಂದಿಗಳು ಮತ್ತು ಕನ್ನಡ ಸಂಸ್ಕೃತಿ ಇಲಾಖೆ ಸೇರಿ ಏರ್ಪೋರ್ಟ್ ಗೆ ಬರುವ ಪ್ರಯಾಣಿಕರು ಹಬ್ಬದ ವಾತಾವರಣ ಸೃಷ್ಟಿ ಮಾಡಿ ಜನರನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ