ಬೆಂಗಳೂರು: ಹರಿಯಾಣ ಮತ್ತು ಜಮ್ಮು-ಕಾಶ್ಮೀರದಲ್ಲಿ ನಮ್ಮದೇ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ನಮ್ಮ ಆಂತರಿಕ ಸಮೀಕ್ಷೆಯಲ್ಲೂ 50 ಕ್ಷೇತ್ರಗಳಲ್ಲಿ ಗೆಲ್ಲುವ ವರದಿ ಇದೆ ಎಂದು ರಾಜ್ಯ ಗೃಹ ಸಚಿವ ಜಿ. ಪರಮೇಶ್ವರ್ ಹೇಳಿದ್ದಾರೆ.
ಬೆಂಗಳೂರಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಎರಡು ರಾಜ್ಯಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೈತ್ರಿ ಸರ್ಕಾರ ಹಾಗೂ ಹರಿಯಾಣದಲ್ಲಿ ನಮ್ಮ ಪಕ್ಷವೇ ಅಧಿಕಾರಕ್ಕೆ ಬರುವ ವಿಶ್ವಾಸವಿದೆ. ಸರ್ವೆಯಲ್ಲೂ ಕನಿಷ್ಠ 50 ಕ್ಷೇತ್ರಗಳಲ್ಲಿ ಗೆಲುವಿನ ವರದಿ ಬಂದಿದೆ. ಇದರಿಂದ ದೇಶದಲ್ಲಿ ಬದಲಾವಣೆ ಪ್ರಾರಂಭವಾಗಿದೆ ಎನ್ನಬಹುದು ಎಂದು ತಿಳಿಸಿದ್ದಾರೆ.
ದೀರ್ಘವಾಗಿ ಚರ್ಚೆ ಮಾಡಿ, ಆರ್ಥಿಕ ಸ್ಥಿತಿಗತಿ ಅಧ್ಯಯನ ಮಾಡಿ ಈ ಗ್ಯಾರಂಟಿಗಳನ್ನು ತಗೊಂಡು ಬಂದಿದ್ದೇವೆ. ಪ್ರಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಟೀಕೆ ಮಾಡಿದ್ರು, ರಾಜ್ಯದಲ್ಲಿ ಜೆಡಿಎಸ್ ನಾಯಕರು ಕೂಡ ಟೀಕೆ ಮಾಡಿದ್ರು. ಯಾವ ಪಕ್ಷ ಜನರಿಗೆ ಸಹಾಯ ಮಾಡುತ್ತದೋ ಅವರ ಪರವಾಗಿ ಜನರು ನಿಲ್ತಾರೆ, ನಾವು ಕೂಡ ಇದನ್ನೇ ಮಾಡಬೇಕು ಅಂತಾ ಈಗ ಅವರಿಗೆ ಅರ್ಥ ಆಗಿದೆ ಎಂದು ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಜಾತಿ ಜನಗಣತಿ ವರದಿ ಜಾರಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಜಾತಿ ಜನಗಣತಿ ನಾವು ತರದೇ ಇದ್ದಾಗ ಕೋಲ್ಡ್ ಸ್ಟೋರೇಜ್ ನಲ್ಲಿ ಇಟ್ಟುಬಿಟ್ರು ಅಂತಿದ್ರು. ಇವಾಗ ನಾವು ಜನ ಸಮುದಾಯದ ಮುಂದೆ ತರುತ್ತಿದ್ದೇವೆ ಅಂದಾಗ, ಅವರಿಗೆ ನುಂಗಲಾರದ ತುತ್ತಾಗಿದೆ. ಹಿಂದುಳಿದವರು, ದಲಿತರು, ಅಲ್ಪಸಂಖ್ಯಾತರು ಹೆಚ್ಚು ಇದ್ದಾರೆ ಎಂದು ಎಲ್ಲರಿಗೂ ಗೊತ್ತಿದೆ. ಅದರ ಆಧಾರದ ಮೇಲೆ ಬರುವ ದಿನಗಳಲ್ಲಿ ಕಾರ್ಯಕ್ರಮ ಕೊಡಲು ಸಹಕಾರಿ ಆಗುತ್ತದೆ. ಹಾಗಾಗಿ ಅದು ಆಗಬಾರದು ಅಂದರೆ, ಈ ಸಮುದಾಯಗಳಿಗೆ ಯೋಜನೆ ಕೊಡಬಾರದಾ..? ಜನಸಂಖ್ಯೆ ಆಧಾರ ಇಟ್ಟುಕೊಂಡು ಯೋಜನೆ ಕೊಡಬೇಕು. ಅದಕ್ಕಾಗಿ ಜಾತಿ ಜನಗಣತಿ ವರದಿಯನ್ನು ಅನುಷ್ಟಾನಕ್ಕೆ ತರಬೇಕೆಂದು ಸಿಎಂ ಹೇಳಿದ್ದಾರೆ. ಅಕ್ಟೋಬರ್ 18ರ ಕ್ಯಾಬಿನೆಟ್ ಸಭೆಯಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳಿದ್ದಾರೆ.