ಬೆಂಗಳೂರು: ಜಾತಿ ಜನಗಣತಿ ವರದಿಯನ್ನು ಮುಂದಿನ ಬಾರಿ ಕ್ಯಾಬಿನೆಟ್ನಲ್ಲಿ ಚರ್ಚೆಗೆ ತರಲಾಗುವುದು. ಕ್ಯಾಬಿನೆಟ್ನಲ್ಲಿ ಚರ್ಚೆ ಆದಮೇಲೆ ನೋಡೋಣ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ (G.Parameshwar) ಹೇಳಿದ್ದಾರೆ.
ಹೈಕಮಾಂಡ್ ರಾಜ್ಯದ ಪ್ರತಿ ಬೆಳವಣಿಗೆ ಕುರಿತು ಮಾಹಿತಿ ಪಡೆಯುತ್ತಿರುವ ವಿಚಾರವಾಗಿ ಮಾತನಾಡಿ, ಅಧ್ಯಕ್ಷರಿಗೆ, ಎಐಸಿಸಿ ನಾಯಕರಿಗೆ ನೇರ ಸಂಪರ್ಕ ಇರುತ್ತದೆ. ಹೈಕಮಾಂಡ್ ಮಾಹಿತಿ ಕಲೆ ಹಾಕುತ್ತಿರುತ್ತದೆ. ಸರ್ಕಾರ ಯಾವ ರೀತಿ ನಡೆಯುತ್ತಿದೆ ಎಂಬುದರ ಮಾಹಿತಿ ಪಡೆಯುತ್ತಿರುತ್ತದೆ. ಗೃಹ ಸಚಿವನಾಗಿ ನನಗೂ ಮಾಹಿತಿ ಬರುತ್ತದೆ. ರಹಸ್ಯವಾಗಿ ಯಾರೂ ಏನೂ ಮಾಡುತ್ತಿಲ್ಲ. ರಾಜಕೀಯವಾದ ಯಾವುದೇ ಗುಂಪುಗಾರಿಕೆ ಆಗುತ್ತಿಲ್ಲ. ನಾನು ಮಹದೇವಪ್ಪ ಮನೆಗೆ ಹೋಗಿದ್ದೆ. ಆದರೆ ರಹಸ್ಯವಾದ ಚರ್ಚೆ ಮಾಡುವಂಥದ್ದು ಏನೂ ಇರಲಿಲ್ಲ ಎಂದಿದ್ದಾರೆ.
ಇದೇ ವೇಳೆ ಅಹಿಂದ ನಾಯಕ ಎಂಬ ಕಾರಣಕ್ಕೆ ಸಿಎಂ ಟಾರ್ಗೆಟ್ ವಿಚಾರವಾಗಿ ಮಾತನಾಡಿ, ಸಿದ್ದರಾಮಯ್ಯಗೆ (CM Siddaramaiah) ಕೆಲವೊಂದು ಮಾಹಿತಿ ಇದ್ದೇ ಹೀಗೆ ಹೇಳಿರಬಹುದು. ಈ ಫ್ಯಾಕ್ಟರ್ ಕೂಡ ಇರಬಹುದು. ಸಿದ್ದರಾಮಯ್ಯ ಹೇಳಿದ್ದರಲ್ಲಿ ತಪ್ಪು ಏನಿದೆ..? ಸಮಾಜ ಯಾವ ರೀತಿ ನಡೆದುಕೊಳ್ಳುತ್ತಿದೆ ನೋಡುತ್ತಿದ್ದೇವೆ. ಅದನ್ನು ಗಮನಿಸಿಯೇ ಸಿದ್ದರಾಮಯ್ಯ ಹೇಳಿರಬಹುದು ಎಂದು ತಿಳಿಸಿದ್ದಾರೆ.
ತನ್ನ ಸರ್ಕಾರದ ಅಭಿವೃದ್ಧಿಯೇ ಉತ್ತಮವಾಗಿತ್ತು ಎಂಬ ಹೆಚ್ಡಿಕೆ (HD Kumaraswamy) ವಿಚಾರವಾಗಿ ಮಾತನಾಡಿ, 14 ತಿಂಗಳ ಆಡಳಿತದಲ್ಲಿ ನಾನೂ ಅವರ ಜೊತೆಗೆ ಇದ್ದೆ. ಕ್ರೆಡಿಟ್, ಡಿಸ್ಕ್ರೆಡಿಟ್ ಎರಡೂ ನಮಗೂ ಸೇರಬೇಕೆಂದಿದ್ದಾರೆ.